ಕರಾಳ ಪೂನಾ ಒಪ್ಪಂದದಿಂದ ದಲಿತರ ಎದೆಗೆ ಚೂರಿ: ಶ್ಯಾಮರಾಜ್ ಬಿರ್ತಿ
ಬ್ರಹ್ಮಾವರ, ಸೆ. 29: ಹಿಂದೂ ಧರ್ಮದಲ್ಲಿ ಯಾವುದೇ ಸ್ಥಾನಮಾನಗಳಿಲ್ಲದ, ಹಿಂದೂ ಧರ್ಮದ ಆಚರಣೆಗಳಿಂದ ದೂರ ಇರಿಸಲಾದ ದಲಿತರು, ಹಿಂದು ಗಳಲ್ಲ ಎಂಬ ತೀರ್ಮಾನಕ್ಕೆ ಬ್ರಿಟಿಷರು ಬಂದು ಅವರಿಗೆ ವಿಶೇಷ ಅವಕಾಶ ವನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಪಟ್ಟರು. ಆದರೆ ಅದಕ್ಕೆ ಈ ದೇಶದ ಮೂಲಭೂತವಾದಿಗಳು, ಮನುವಾದಿಗಳು ಈ ಕರಾಳ ಪೂನಾ ಒಪ್ಪಂದ ಮಾಡಿಕೊಂಡು ದಲಿತರ ಎದೆಗೆ ಚೂರಿ ಹಾಕಿದರು ಎಂದು ದಸಂಸ (ಅಂಬೇಡ್ಕರ್ವಾದ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆರೋಪಿಸಿದ್ದಾರೆ.
ಸೆಪ್ಟೆಂಬರ್ 24ರ ದಲಿತರ ಪಾಲಿನ ಕರಾಳ ದಿನ ಪೂನಾ ಒಪ್ಪಂದದ ಕುರಿತು ಬ್ರಹ್ಮಾವರ ಅಂಬೇಡ್ಕರ್ ಭವನದಲ್ಲಿ ಸೆ.27ರಂದು ಆಯೋಜಿಸ ಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಪೂನ ಒಪ್ಪಂದ ಆಗದೇ ಹೋಗಿದ್ದರೆ ನಿಜವಾಗಿಯೂ ರಾಜಕೀಯದಲ್ಲಿ ದಲಿತರ ಪರ ಧ್ವನಿ ಎತ್ತುವಂತಾಗುತಿತ್ತು ಎಂದು ಹೇಳಿದರು.
ಪೂನ ಒಪ್ಪಂದದ ಬಗ್ಗೆ ಪ್ರಧಾನ ಭಾಷಣ ಮಾಡಿದ ಉಡುಪಿಯ ವಕೀಲ ಮಂಜುನಾಥ್ ವಿ.ಮಾತನಾಡಿ, ಪೂನಾ ಒಪ್ಪಂದವು ಗಾಂಧೀಜಿ ಯವರು ದಲಿತರಿಗೆ ಮಾಡಿದ ದ್ರೋಹ. ಬ್ರಿಟೀಷರು ದಲಿತರಿಗೆ ಕೊಟ್ಟ ಅವಕಾಶವನ್ನು ಕಿತ್ತುಕೊಂಡು ಅನ್ಯಾಯ ಮಾಡಲಾಯಿತು. ಚಾತುರ್ವರ್ಣ ವ್ಯವಸ್ಥೆಯನ್ನು ಮುಂದುವರಿಸುವುದಕ್ಕಾಗಿಯೇ ಈ ಒಪ್ಪಂದಕ್ಕೆ ಒತ್ತಾಯಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಎಸ್. ಎಸ್.ಪ್ರಸಾದ್, ಜಿಲ್ಲಾ ದಲಿತ ಸರಕಾರಿ ನೌಕರರ ಒಕ್ಕೂಟದ ಸಂಚಾಲಕ ರಾಘವೇಂದ್ರ, ಅಂಬೇಡ್ಕರ್ ಯುವಕ ಮಂಡಳದ ಮಾಜಿ ಅಧ್ಯಕ್ಷ ಹರಿಶ್ಚಂದ್ರ, ದಸಂಸ ಉಡುಪಿ ತಾಲೂಕು ಸಂಚಾಲಕ ಶಂಕರ್ ದಾಸ್ ಚೆಂಡ್ಕಳ, ಮುಖಂಡ ರಾದ ಶ್ಯಾಮಸುಂದರ್ ತೆಕ್ಕಟ್ಟೆ, ಶ್ರೀನಿವಾಸ ವಡ್ಡರ್ಸೆ, ಗೋಪಾಲಕೃಷ್ಣ ಕುಂದಾಪುರ ಉಪಸ್ಥಿತರಿದ್ದರು.