ಬೆಳ್ತಂಗಡಿ: ರಿಕ್ಷಾ ಚಾಲಕನಿಂದ ಯುವತಿಯ ಮಾನಭಂಗಕ್ಕೆ ಯತ್ನ
ಬೆಳ್ತಂಗಡಿ, ಜೂ.8: ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯೋರ್ವಳನ್ನು ರಿಕ್ಷಾ ಚಾಲಕನೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ಸೋಣಂದೂರು ಗ್ರಾಮದ ಸಬರಬೈಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಆರೋಪಿಯನ್ನು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಆದಂ(23) ಎಂದು ಗುರುತಿಸಲಾಗಿದೆ. ಯುವತಿಯು ಅಳದಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಸು ಸಬರಬೈಲ್ ಬಲ್ಲಾಳಗೇಟ್ ಎಂಬಲ್ಲಿನ ತನ್ನ ಮನೆಗೆ ಬರುತ್ತಿದ್ದ ಸಂದರ್ಭ ಗುರುವಾಯನಕೆರೆಯಲ್ಲಿ ಬಸ್ಗಾಗಿ ಕಾಯುತ್ತಿದ್ದಳು.
ಈ ಸಂದರ್ಭದಲ್ಲಿ ಆರೋಪಿ ಬಾಡಿಗೆ ರಿಕ್ಷಾ ಚಾಲಕನು ತಾನು ಪಣಕಜೆ ಹೋಗುವುದಾಗಿ ತಿಳಿಸಿದ್ದು, ಯುವತಿ ರಿಕ್ಷಾವನ್ನು ಹತ್ತಿದ್ದಳು. ಚಾಲಕ ರಿಕ್ಷಾಕ್ಕೆ ಬೇರೆ ಯಾವ ಪ್ರಯಾಣಿಕರನ್ನೂ ಹತ್ತಿಸಿಕೊಳ್ಳದೆ ಸೀದಾ ಪಣಕಜೆ ಕಡೆಗೆ ಬಂದಿದ್ದ. ಸಬರ ಬೈಲ್ ಬಲ್ಲಾಳ್ಗೇಟ್ ತಲುಪಿದಾಗ ಯುವತಿಯು ರಿಕ್ಷಾವನ್ನು ನಿಲ್ಲಿಸುವಂತೆ ಹೇಳಿ ರಿಕ್ಷಾದಿಂದ ಇಳಿದು ಚಾಲಕನಿಗೆ ಹಣವನ್ನು ಕೊಡುವ ಸಂದರ್ಭ ಚಾಲಕ ಯುವತಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಮೈಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಆಕೆ ಬೊಬ್ಬೆ ಹೊಡೆದಾಗ ಸ್ಥಳೀಯರು ಧಾವಿಸಿ ಬಂದು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.