ಪ್ಲಾಸ್ಮಾ ದಾನ ಮಾಡುವಂತೆ ದ.ಕ. ಜಿಲ್ಲಾಧಿಕಾರಿ ಮನವಿ
ಮಂಗಳೂರು, ಅ.1: ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹಾದಾನವಾಗಿದೆ. ಪ್ರಸ್ತುತ ಕೋವಿಡ್-19ರ ಸಂದರ್ಭ ರಕ್ತದಾನದ ಜತೆಗೆ ಪ್ಲಾಸ್ಮಾ ದಾನದಿಂದ ಕೂಡ ರೋಗಿಯ ಜೀವ ಉಳಿಸುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಪ್ಲಾಸ್ಮಾದಾನದ ಕುರಿತು ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಇದಕ್ಕೆ ಬೇಕಾದ ಯಂತ್ರಗಳು ಬಂದಿವೆ. ಸರಕಾರದ ಅನುಮತಿ ಸಿಕ್ಕಿದ ತಕ್ಷಣ ಪ್ಲಾಸ್ಮಾ ಥೆರಪಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಕ್ತದಾನ ಮತ್ತು ಪ್ಲಾಸ್ಮಾದಾನ ಮಾಡಲು ಬಯಸುವವರು ಭಾರತೀಯ ರೆಡ್ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಚಾಲಕ ಪ್ರವೀಣ್ ಕುಮಾರ್ (9916262459) ಅವರನ್ನು ಸಂಪರ್ಕಿಸಬಹುದು. ದಕ್ಷಿಣ ಜಿಲ್ಲಾಡಳಿತ ಹಾಗೂ ರೆಡ್ಕ್ರಾಸ್ ಸಂಸ್ಥೆ ಜೊತೆಯಾಗಿ ಪ್ಲಾಸ್ಮಾ ದಾನಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.