ಬಿ.ಸಿ.ರೋಡ್: ಅವಿಭಜಿತ ಜಿಲ್ಲಾ ಮಟ್ಟದ ಚೆಸ್ ಪಂದ್ಯ
ಬಂಟ್ವಾಳ, ಜೂ.19: ಮಕ್ಕಳಿಗೆ ಬಾಲ್ಯದಿಂದಲೇ ಚೆಸ್ ಪಂದ್ಯಾಟದ ಬಗ್ಗೆ ಸೂಕ್ತ ತರಬೇತಿ ನೀಡಿದಾಗ ಅವರಲ್ಲಿ ಶೈಕ್ಷಣಿಕ ಸಂಪತ್ತಿನ ಜೊತೆಗೆ ತಾಳ್ಮೆ ಮತ್ತು ಸ್ವಂತಿಕೆಯ ಆಲೋಚನಾ ಶಕ್ತಿ ವೃದ್ಧಿಸುತ್ತದೆ ಎಂದು ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಅಶ್ವನಿ ಕುಮಾರ್ ರೈ ಅಭಿಪ್ರಾಯಪಟ್ಟರು.
ಬಂಟ್ವಾಳ ಚೆಸ್ ಅಕಾಡಮಿಯ ವತಿಯಿಂದ ಬಿ.ಸಿ.ರೋಡ್ನಲ್ಲಿ ರವಿವಾರ ಏರ್ಪಡಿಸಿದ್ದ ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಚೆಸ್ ಆಟಗಾರ, ವಕೀಲ ಸುದರ್ಶನ್ ಕುಮಾರ್ ಚೆಸ್ ಆಟದ ಮಹತ್ವ ಮತ್ತು ಸ್ಪರ್ಧೆ ಬಗ್ಗೆ ವಿವರಿಸಿದರು. ಇದೇ ವೇಳೆ 7ರಿಂದ 16ರ ವಯೋಮಾನ ಮತ್ತು ಮುಕ್ತ ವಿಬಾಗದಲ್ಲಿ ಸುಮಾರು 300ಕ್ಕೂ ಮಿಕ್ಕಿ ಮಂದಿ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.
ಉದ್ಯಮಿ ಜಯಚಂದ್ರ ಬೊಂಳ್ಬಾರು, ರಾಷ್ಟ್ರೀಯ ಚೆಸ್ ಆಟಗಾರ ಶಾಬ್ದಿಕ್ ವರ್ಮಾ, ಮಂಗಳೂರು ಡೆರಿಕ್ ಚೆಸ್ ಶಾಲೆಯ ಡೆರಿಕ್ ಪಿಂಟೊ, ಪ್ರಸನ್ನ ರಾವ್, ಚಂದ್ರಶೇಖರ ಭಂಡಾರಿ ಮತ್ತಿತರರು ಇದ್ದರು.
ವಕೀಲ ರಾಮಚಂದ್ರ ಶೆಟ್ಟಿ ದಂಡೆ ಸ್ವಾಗತಿಸಿ, ಶಿಕ್ಷಕಿ ಶಾಲೆಟ್ ಪಿಂಟೊ ವಂದಿಸಿದರು. ಶಿಕ್ಷಕಿ ವೀಣಾ ಭಟ್ ಕಾರ್ಯಕ್ರಮ ನಿರೂಪಿಸಿದರು.