ಎಸ್ಒಸಿ ವಿದ್ಯಾರ್ಥಿಗಳ ಕಿರುಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಉಡುಪಿ, ಜು.21: ಮಣಿಪಾಲ ವಿವಿಯ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ನ ವಿದ್ಯಾರ್ಥಿಗಳು ತಯಾರಿಸಿದ ಕಿರುಚಿತ್ರ ‘ಕಮ್ಯುನಿಟಿ ರೇಡಿಯೋ ವೀಡಿಯೊ ಚಾಲೆಂಜ್-2016’ ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದೆ. ‘ಬಾನುಲಿ ಕೇಂದ್ರ’ ಎಂಬ ಹೆಸರಿನ 2 ನಿಮಿಷ 58 ಸೆಕೆಂಡ್ ಕಾಲಾವಧಿಯ ಈ ಕಿರುಚಿತ್ರವನ್ನು ಎಸ್ಒಸಿಯ ವಿದ್ಯಾರ್ಥಿಗಳಾದ ಸೌರಭ್ ಆಚಾರ್ಯ ಮತ್ತು ಕಾರ್ತಿಕ್ ಶೆಟ್ಟಿ ಬರೆದು ನಿರ್ದೇಶಿಸಿದ್ದರು.
ಕಾಮನ್ವೆಲ್ತ್ ಎಜ್ಯುಕೇಶನ್ ಮೀಡಿಯ ಸೆಂಟರ್ ಫಾರ್ ಏಶಿಯಾ (ಸಿಇಎಂಸಿಎ) ಮತ್ತು ಯುನೈಟೆಡ್ ನೇಶನ್ಸ್ ಎಜ್ಯುಕೇಶನಲ್, ಸೈಂಟಿಫಿಕ್ ಆ್ಯಂಡ್ ಕಲ್ಚರಲ್ ಆರ್ಗನೈಜೇಶನ್(ಯುನೆಸ್ಕೊ) ಈ ಸ್ಪರ್ಧೆಯನ್ನು ಆಯೋಜಿಸಿತ್ತು.
ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 40 ಕಿರುಚಿತ್ರ ಗಳು ಸ್ಪರ್ಧಿಸಿದ್ದವು. 12 ಮಂದಿ ತಜ್ಞರು ತೀರ್ಪುಗಾರರಾಗಿದ್ದರು. ಹೊಸದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ ಪ್ರಶಸ್ತಿ ಮತ್ತು 30,000 ರೂ. ಬಹುಮಾನವನ್ನು ವಿತರಿಸಿದರು. ಯುಜಿಸಿಸಿಇಸಿ ನಿರ್ದೇಶಕ ರಾಜ್ಬೀರ್ ಸಿಂಗ್, ಯುನೆಸ್ಕೊದ ಪ್ರತಿನಿಧಿ ಶಿಗೆರು ಆಯಗಿ, ಸಿಇಎಂಸಿಎ ನಿರ್ದೇಶಕ ಡಾ.ಶಹೀದ್ ರಸೂಲ್, ಕೇಂದ್ರ ಸರಕಾರದ ಮಾಹಿತಿ-ಪ್ರಸಾರ ಸಚಿವಾಲಯದ ಆರ್ಥಿಕ ಸಲಹೆಗಾರ ಡಾ. ಮುನೀಶ್ ಕುಮಾರ್, ಪತ್ರಕರ್ತೆ ಆರ್ತಿ ಟಿಕೂ, ಯುನೆಸ್ಕೊ ಕಾರ್ಯಕ್ರಮ ನಿರ್ದೇಶಕ ಎಲ್. ಅಮೀನ್ ಯುಸೂಫ್ ಉಪಸ್ಥಿತರಿದ್ದರು.