ನಿಧನ
ರಘುರಾಮ ಶೆಟ್ಟಿ
ರಘುರಾಮ ಶೆಟ್ಟಿ
ಪಡುಬಿದ್ರೆ, ಜು.23: ಪ್ರಗತಿಪರ ಕೃಷಿಕ, ಪರಿಸರ ಪ್ರೇಮಿ ನಂದಿಕೂರು ಕೊಂಕಣೊಟ್ಟುವಿನ ರಘುರಾಮ ಎನ್. ಶೆಟ್ಟಿ (62) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಆದರ್ಶ ಕೃಷಿಕರಾಗಿದ್ದ ರಘುರಾಮ ಶೆಟ್ಟಿ ನಂದಿಕೂರು ಜನಜಾಗೃತಿ ಸಮಿತಿಯ ಉಪಾಧ್ಯಕ್ಷರಾಗಿ, ಪರಿಸರ ಹೋರಾಟಗಾರರಾಗಿ ಮುಂಚೂಣಿಯಲ್ಲಿದ್ದರು. ನಂದಿಕೂರು ಎಲ್ಲೂರು ಪರಿಸರದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಸರಕಾರಗಳು ಮುಂದಾದಾಗ ಅದನ್ನು ಕಟುವಾಗಿ ವಿರೋಧಿಸಿದ್ದ ಅವರು, ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಅಲ್ಲದೆ ಜನವಿರೋಧಿ ಯೋಜನೆಗಳನ್ನು ಸ್ಥಾಪನೆ ಮಾಡಲು ಮುಂದಾದ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ನಂದಿಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ, ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಉಪಾಧ್ಯಕ್ಷರಾಗಿದ್ದ ರಘುರಾಮ ಶೆಟ್ಟಿಯ ನಿಧನದಿಂದ ನಂದಿಕೂರು ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ.
ಮೃತರ ಅಂತ್ಯಕ್ರಿಯೆ ರವಿವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ನಂದಿಕೂರು ಪರಿಸರದಲ್ಲಿ ಬಂದ್ ಆಚರಿಸಿ ಮೃತರಿಗೆ ಗೌರವ ಸಲ್ಲಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.