ಅವಳಿ ವೀರರ ಧ್ಯೇಯವನ್ನು ಬಿಲ್ಲವರು ಮೈಗೂಡಿಸಿಕೊಳ್ಳಬೇಕು: ಪ್ರಮೀಳಾ ಎಂ.ಕೆ.
ಬಿರುವೆರ್ನ ಆಟಿ ಕೂಟ
ಪುತ್ತೂರು, ಜು.24: ಅವಳಿ ವೀರರಾದ ಕೋಟಿ ಚೆನ್ನಯರು ನ್ಯಾಯದ ಹಾದಿಯಲ್ಲಿ ಬದುಕಿದವರಾಗಿದ್ದು, ಸತ್ಯ, ಧರ್ಮ ಮತ್ತು ಪರಾಕ್ರಮಕ್ಕೆ ಸಾಕ್ಷಿಯಾಗಿರುವ ಇವರ ಧ್ಯೇಯವನ್ನು ಬಿಲ್ಲವರು ಮೈಗೂಡಿಸಿಕೊಳ್ಳಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಪ್ರಮೀಳಾ ಎಂ.ಕೆ. ಹೇಳಿದರು.
ಅವರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬಿಲ್ಲವರ ಮಹಿಳಾ ವೇದಿಕೆ ಪುತ್ತೂರು ಇವುಗಳ ಆಶ್ರಯದಲ್ಲಿ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆದ ‘ಬಿರುವೆರ್ನ ಆಟಿ ಕೂಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಹಿರಿಯರಿಂದ ಬಂದಿರುವ ಪ್ರತಿಯೊಂದು ಆಚರಣೆಗಳ ಹಿಂದೆಯೂ ವೈಜ್ಞಾನಿಕ ಹಿನ್ನಲೆಯಿದೆ. ಆಟಿ ಕೂಟ ಆಚರಣೆಯ ಜೊತೆಗೆ ಆಟಿಯ ಮಹತ್ವವನ್ನು ಅರಿತುಕೊಳ್ಳುವ ಕೆಲಸವಾಗಬೇಕು ಎಂದರು.
ಸಾಹಿತಿ, ಸಂಶೋಧಕ ರಮಾನಂದ ಕೋಟೆಕಾರ್ ಆಟಿದ ಮದಿಪು ನೀಡುತ್ತಾ ತುಳುನಾಡಿನ ಬಿಲ್ಲವರ ಗುತ್ತು ಮನೆತನಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ಹಲವು ಗುತ್ತು ಮನೆತನದ ಬಿಲ್ಲವರು ಮುಗ್ಧ ಮನೋಭಾವದಿಂದ ತಮ್ಮೆಲ್ಲ ಜಮೀನುಗಳನ್ನು ಕಳೆದುಕೊಂಡವರಿದ್ದಾರೆ. ಬಿಲ್ಲವರ ಸತ್ಯಸಂಧತೆಯು ಮತ್ತೊಬ್ಬರಿಂದ ಮೋಸ ಹೋಗುವುದಕ್ಕೆ ಬಳಕೆಯಾಗಬಾರದು ಎಂಬ ಎಚ್ಚರಿಕೆ ಪ್ರಜ್ಞೆ ಅತ್ಯಗತ್ಯ ಎಂದರು.
ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಶ್ರೀ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಯುವವಾಹಿನಿ ಘಟಕದ ನಿರ್ಗಮನ ಅಧ್ಯಕ್ಷ ಶಶಿಧರ್ ಕಿನ್ನಿಮಜಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಮಿತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಭವಾನಿ ಚಿದಾನಂದ್, ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವರ್ಷಾ ಪಿ. ಅವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯೆ ಶಯನಾ ಜಯಾನಂದ್, ತಾಪಂ ಸದಸ್ಯೆಯರಾದ ಕುಸುಮಾ ಪಿ.ವೈ., ತಾರಾ ತಿಮ್ಮಪ್ಪ ಪೂಜಾರಿ, ಆಶಾ ಲಕ್ಷ್ಮಣ್, ಉಚಾ ಅಂಚನ್ರಿಗೆ ಗೌರವ ಸಮರ್ಪಿಸಲಾಯಿತು. ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಸ್ವಾಗತಿಸಿದರು. ಮಹಿಳಾ ವೇದಿಕೆಯ ಖಜಾಂಚಿ ವಿನಯಾ ಬಲ್ನಾಡ್ ವಂದಿಸಿದರು. ದೇವಿಕಾ ಬನ್ನೂರು ಮತ್ತು ವಿಮಲಾ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.