ಪೊಳಲಿ ನಿತ್ಯಾನಂದ ಕಾರಂತರಿಗೆ ಶೇಣಿ ಕಲೋತ್ಸವ ಪ್ರಶಸ್ತಿ
ಮಂಗಳೂರು, ಆ.4: ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಆಗಸ್ಟ್ 11ರಂದು ನಗರದ ಡಾನ್ಬಾಸ್ಕೋ ಹಾಲ್ನಲ್ಲಿ ಜಗಲಿರುವ ಶೇಣಿ ಸಂಸ್ಮರಣೆ ಕಲೋತ್ಸವ ಸಮಾರಂಭದಲ್ಲಿ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತರಿಗೆ ಶೇಣಿ ಕಲೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ ಹಾಗೂ ಗೌರಮ್ಮ ದಂಪತಿಗಳ ಪುತ್ರ ನಿತ್ಯಾನಂದ ಕಾರಂತರು ಸುಪ್ರಸಿದ್ಧ ತುಳು ಯಕ್ಷಗಾನ ಪ್ರಸಂಗಗಳಾದ ಸತ್ಯದಪ್ಪೆಚೆನ್ನಮ್ಮ, ನಾಡಕೇದಗೆ, ಧರ್ಮಧಾರೆ, ಪಣಂಬೂರುಕ್ಷೇತ್ರ ಮಹಾತ್ಮೆ, ದಂಡಕಾರಣ್ಯ ಮುಂತಾದ 20 ಪ್ರಸಂಗಗಳನ್ನು ರಚಿಸಿದ್ದಾರೆ. ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ, ಕಲಾವಿದರಾಗಿ, ಬರಹಗಾರನಾಗಿ ಚಿರಪರಿಚಿತರಾಗಿರುವ ಕಾರಂತರು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ತಂಡವನ್ನು ಐತಾಳರ ಜೊತೆಗೂಡಿ ಪ್ರಥಮ ಬಾರಿಗೆ ದುಬೈ, ಅಬುಧಾಬಿಗೆ ಕರೆದೊಯ್ದಿರುವ ನಿತ್ಯಾನಂದ ಕಾರಂತರು ಅನೇಕ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ದುಬೈ ಕನ್ನಡ ಸಂಘದಿಂದ, ಅಮೆರಿಕಾದ ಡೆಟ್ರೋಯ್ಡೋನ ಕನ್ನಡ ಸಂಘದಿಂದ, ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಮಂಗಳೂರು ತಾಲೂಕು ಸಮ್ಮೇಳನದಲ್ಲೂ ಸನ್ಮಾನಿತರಾಗಿದ್ದಾರೆ. ಆ.11ರಂದು ಸಂಜೆ 5ಕ್ಕೆ ಮಂಗಳೂರು ಡಾನ್ಬಾಸ್ಕೋ ಹಾಲ್ನಲ್ಲಿ ಶೇಣಿ ಸಂಸ್ಮರಣೆ - ಶೇಣಿಕಲೋತ್ಸವ ಪುರಸ್ಕಾರ ಯಕ್ಷಗಾನ ಬಯಲಾಟ ಜರಗಲಿರುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.