ಪತ್ರಿಕೆಗಳ ಸಂಪಾದಕೀಯಗಳಿಂದ ವಿದ್ಯಾರ್ಥಿಗಳ ಜ್ಞಾನಭಂಡಾರ ವೃದ್ಧಿ: ಕಮಿಷನರ್ ಎಂ. ಚಂದ್ರಶೇಖರ್
ಮಂಗಳೂರು, ಆ.6: ಪತ್ರಿಕೆಯನ್ನು ಓದುವ ಮೂಲಕ ಪ್ರಪಂಚದ ಆಗುಹೋಗುಗಳ ಬಗ್ಗೆ ನಿಖರ ಮಾಹಿತಿ ತಿಳಿಯಲು ಸಾಧ್ಯವಿದೆ. ಪತ್ರಿಕೆಗಳಲ್ಲಿ ಬರುವ ಸಂಪಾದಕೀಯಗಳ ಮೂಲಕ ಒಂದು ವಿಚಾರದ ಬಗ್ಗೆ ಸಮಗ್ರ ಅಭಿಪ್ರಾಯ ತಿಳಿಯಬಹುದಾಗಿದ್ದು, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಿ ಜ್ಞಾನಭಂಡಾರ ಹೆಚ್ಚಿಸಬೇಕು ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ ಹೇಳಿದ್ದಾರೆ.
ಅವರು ನಗರದ ಪುರಭವನದಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘ ಮತ್ತು ವಾರ್ತಾ ಪ್ರಚಾರ ಇಲಾಖೆ ಜಂಟಿ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾಮಟ್ಟದ ಕ್ವಿಝ್ ಸ್ಪರ್ಧೆ ‘ಚಾಣಕ್ಯ-2016’ನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ಶಿಬಪೂಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ಜಿ., ಮೂಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ದ.ಕ ಜಿಲ್ಲಾ ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಕವಿ ಮುಹಮ್ಮದ್ ಬಡ್ಡೂರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಐಸಾಕ್ ರಿಚರ್ಡ್ ವಂದಿಸಿದರು.
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಗಳ ವಿಜೇತರ ವಿವರ ಹೀಗಿದೆ.
ಪ್ರೌಢಶಾಲಾ ವಿಭಾಗ:
ಪ್ರಥಮ- ರಾಜೇಶ್ವರಿ ಶೆಟ್ಟಿ ಮತ್ತು ಶಿವಾನಿ ಭಂಡಾರ್ಕರ್, ವಿಕ್ಟೋರಿಯಾ ಪ್ರೌಢಶಾಲೆ, ಲೇಡಿಹಿಲ್, ಮಂಗಳೂರು, ದ್ವಿತೀಯ- ಸುಶಾಂತ ಮ. ನಾಗಣ್ಣನವರ್ ಮತ್ತು ನಿತಿನ್ ಬಿ.ಕೆ. ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ, ಬಂಟ್ವಾಳ ತಾಲೂಕು.
ಪದವಿಪೂರ್ವ ಕಾಲೇಜು ವಿಭಾಗ:
ಪ್ರಥಮ-ಸಿದ್ಧಾರ್ಥ ಬಂಗೇರ ಮತ್ತು ಪ್ರಣವ್ ರಾವ್, ಶಾರದಾ ಪದವಿಪೂರ್ವ ಕಾಲೇಜು, ಕೊಡಿಯಾಲ್ಬೈಲು, ಮಂಗಳೂರು, ದ್ವಿತೀಯ- ಸಂಜಯ್ ಕಾಮತ್ ಮತ್ತು ಮೆಲ್ರೋಯ್ ಡೇಸಾ, ಎಸ್.ವಿ.ಎಸ್.ಪದವಿಪೂರ್ವ ಕಾಲೇಜು, ಬಂಟ್ವಾಳ.