ಆ. 21ರಂದು ಬಿಜೆಪಿ ವತಿಯಿಂದ ‘ಸ್ವಾತಂತ್ರೋತ್ಸವ ಬಲಿದಾನ ಸ್ಮರಣೆ’ ಕಾರ್ಯಕ್ರಮ
ಮಂಗಳೂರು, ಆ. 18 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆ.21 ರಂದು ದ.ಕ ಜಿಲ್ಲೆಗೆ ಭೇಟಿ ನೀಡಲಿದ್ದು 70ನೆ ಸ್ವಾತಂತ್ರೋತ್ಸವ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ಬೆಳಗ್ಗೆ 10ಕ್ಕೆ ನಗರದ ಪಿವಿಎಸ್ ವೃತ್ತ ಬಳಿಯ ಬಿಜೆಪಿ ಕಚೇರಿ ಮುಂಭಾಗ ‘ಗಿಡ ನೆಡಿ ಪರಿಸರ ಉಳಿಸಿ’ ಕಾರ್ಯಕ್ರಮದಲ್ಲಿ ಗಿಡ ನೆಡಲಿದ್ದಾರೆ. 10:20ಕ್ಕೆ ನಗರದ ಮಹಾವೀರ (ಪಂಪ್ವೆಲ್) ವೃತ್ತದಲ್ಲಿ ತಿರಂಗಾ ಯಾತ್ರೆಯ ಬೃಹತ್ ವಾಹನ ರ್ಯಾಲಿ ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ 11ಕ್ಕೆ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಹಾರಾರ್ಪಣೆ ಮುಖಾಂತರ ‘ಬಲಿದಾನ ಸ್ಮರಣೆ’ ಕಾರ್ಯಕ್ರಮ ನಡೆಯಲಿದೆ. 11:30ಕ್ಕೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿಗಳಾದ ಬ್ರಿಜೇಶ್ ಚೌಟ, ಸುದರ್ಶನ್ ಮೂಡುಬಿದಿರೆ, ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ಚಂದ್ರಹಾಸ ಉಳ್ಳಾಲ್, ವಕ್ತಾರರಾದ ಜಿತೇಂದ್ರ ಕೊಟ್ಟಾರಿ, ವಿಕಾಸ್ ಪುತ್ತೂರು, ಮುಖಂಡರುಗಳಾದ ರಾಜೇಶ್ ಕೊಟ್ಟಾರಿ, ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.