ಕೆಎಂಎಫ್ ಮಾದರಿಯಲ್ಲಿ ದ್ವಿದಳಧಾನ್ಯ ಬೆಳೆಗಾರರ ಒಕ್ಕೂಟ: ಡಾ.ಕಮ್ಮರಡಿ
ಉಡುಪಿ, ಆ.20: ದ್ವಿದಳಧಾನ್ಯ ಬೆಳೆ ಗಾರರ ಬವಣೆ ದೂರ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ(ಕೆಎಂಎಫ್) ಮಾದರಿ ಯಲ್ಲಿ ಕರ್ನಾಟಕ ದ್ವಿದಳಧಾನ್ಯಗಳ ಉತ್ಪಾ ದಕರ ಸಂಘಟನೆಗಳ ಮಹಾಮಂಡಲ ವನ್ನು ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕರ್ನಾಟಕ ಕೃಷಿ ಬೆಳೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆಯ ಲಾದ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ದ್ವಿದಳಧಾನ್ಯಕ್ಕೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಖರೀದಿಸಿ ಪಡಿತರ ಮೂಲಕ ಅವನ್ನು ವಿತರಿಸುವಂತೆ ಶಿಫಾ ರಸು ಮಾಡಲಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ತೊಗರಿಬೇಳೆ ಮಂಡಳಿಯನ್ನು ಮಹಾ ಮಂಡಳದಲ್ಲಿ ವಿಲೀನ ಮಾಡುವಂತೆ ತಿಳಿಸಲಾಗಿದೆ. ಇದನ್ನು ಕಾರ್ಯ ರೂಪಕ್ಕೆ ತರಲು ವಿಶೇಷ ಅಧಿಕಾರಿಯನ್ನು ನೇಮಿಸಬೇಕಾಗಿದೆ ಎಂದರು.
ಕೃಷಿಭೂಮಿ ಮಾಯ:
ಉಡುಪಿ ಜಿಲ್ಲೆಯಲ್ಲಿ 10 ವರ್ಷಗಳಲ್ಲಿ 13,216 ಹೆಕ್ಟೇರ್ ಭತ್ತ ಹಾಗೂ 5,292 ಹೆಕ್ಟೇರ್ ದ್ವಿದಳ ಧಾನ್ಯಗಳ ಕೃಷಿಭೂಮಿ ಮಾಯವಾಗಿದ್ದು, 4,840 ಹೆಕ್ಟೇರ್ ತೋಟಗಾರಿಕೆ ವೃದ್ಧಿಯಾಗಿದೆ. ಸುಮಾರು 15 ಸಾವಿರ ಹೆಕ್ಟೇರ್ನಷ್ಟು ಕೃಷಿಭೂಮಿ ಇಂದು ರೈತರಿಂದ ಕೈತಪ್ಪಿ ಹೋಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಭತ್ತಕ್ಕೆ 1,475 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಈ ಬಾರಿಯೂ ರಾಜ್ಯ ಸರಕಾರ ಅದಕ್ಕೆ 100 ರೂ. ಪ್ರೋತ್ಸಾಹ ಧನ ನೀಡುವಂತೆ ಆಯೋಗದಿಂದ ಶಿಫಾರಸು ಮಾಡಲಾಗಿದೆ. ಭತ್ತದ ಕಟಾವು ಸಮಯವನ್ನು ತಿಳಿಸಿದರೆ ಮುಂಚಿತವಾಗಿ ಖರೀದಿ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದರು.
20 ಲಕ್ಷ ಕ್ವಿಂಟಾಲ್ ಭತ್ತ ಎಲ್ಲಿ?: ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ 73,247 ಕ್ವಿಂಟಾಲ್ ಭತ್ತ ಖರೀದಿಯಾಗಿದೆ. ಇದಕ್ಕೆ ಉಡುಪಿ ತಾಲೂಕಿನಲ್ಲಿ ಕ್ವಿಂಟಾಲ್ಗೆ 1,525 ರೂ., ಕಾರ್ಕಳ ಹಾಗೂ ಕುಂದಾಪುರದಲ್ಲಿ 1,450 ರೂ. ಬೆಲೆಯನ್ನು ನೀಡಲಾಗಿದೆ. ಇವುಗಳೆಲ್ಲವೂ ಸ್ಥಳೀಯರು ಬೆಳೆದ ಭತ್ತಗಳಲ್ಲ. ಹರಿಯಾಣ, ಮಧ್ಯಪ್ರದೇಶಗಳ ಭತ್ತವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಪ್ರಕಾಶ್ ಕಮ್ಮರಡಿ, ಹಾಗಾದರೆ ಉಡುಪಿ ಜಿಲ್ಲೆಯ ಕೃಷಿಕರು ಬೆಳೆದ 20 ಲಕ್ಷ ಕ್ವಿಂಟಾಲ್ ಭತ್ತ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳಿಂದ ಸರಿಯಾದ ಉತ್ತರ ಬರದಿದ್ದಾಗ, ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅವರು ಜಿಪಂ ಸಿಇಒಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.