ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ರಾಷ್ಟ್ರೀಯತೆಗೆ ಧಕ್ಕೆ: ಅಮಿತ್ ಶಾ
ಮಂಗಳೂರು, ಆ.21: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡುತ್ತಿರುವವರನ್ನು ನಿರ್ಲಕ್ಷಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಅವರು ಬಿಜೆಪಿ ನೇತೃತ್ವದ ತಿರಂಗಾ ಯಾತ್ರೆಯ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ರವಿವಾರ ನಡೆದ ರಾಣಿ ಅಬ್ಬಕ್ಕ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಕೆಲವು ಕಡೆ, ಕೆಲವು ಮಂದಿ ರಾಷ್ಟ್ರವಾದದ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ರಾಷ್ಟ್ರವಾದ ಇಲ್ಲದೇ ಹೋಗಿದ್ದರೆ ನಮಗೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ರಾಷ್ಟ್ರ ವಿರೋಧಿ ವಾದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಉಡುಗೆ ತೊಡಿಸುವ ಅಗತ್ಯ ಇಲ್ಲ. ದೇಶಪ್ರೇಮವನ್ನು ಪ್ರಶ್ನಿಸುತ್ತಿರುವವರು ದೇಶದ ಇತಿಹಾಸವನ್ನು ಅರಿಯಲಿ ಎಂದರು.
ರಾಷ್ಟ್ರೀಯತೆ, ರಾಷ್ಟ್ರಪ್ರೇಮದ ಆಧಾರದಲ್ಲಿ ನಮಗೆ ಸ್ವಾತಂತ್ರ್ಯ ದೊರೆತಿದೆ. ರಾಷ್ಟ್ರೀಯತೆ ಇಲ್ಲದಿರುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. ಸ್ವಾತಂತ್ರ್ಯ ದೊರೆತ ಕಾರಣದಿಂದಲೇ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ರಾಷ್ಟ್ರದ ವಿರುದ್ಧ ಮಾತನಾಡುವವರು ದೇಶದ ಇತಿಹಾಸ ಓದಿ. ಹಾಗಾದಾಗ ಮಾತ್ರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸ್ವಾತಂತ್ರ್ಯಕ್ಕಾಗಿ ಎಷ್ಟು ಸಹಸ್ರ ಮಂದಿಯ ಬಲಿದಾನ ಆಗಿದೆ ಎನ್ನುವುದು ಗೊತ್ತಾಗುತ್ತದೆ. ಅವರೆಲ್ಲರ ಬಲಿದಾನಕ್ಕೆ ಕಾರಣವಾದದ್ದು ರಾಷ್ಟ್ರಭಕ್ತಿ ಮಾತ್ರ. ರಾಷ್ಟ್ರಭಕ್ತಿ ಇಲ್ಲದಿದ್ದರೆ ಭಗತ್ ಸಿಂಗ್, ಸುಖದೇವ್ರಂಥ ಹೋರಾಟಗಾರರು ನೇಣುಗಂಬ ಏರುತ್ತಿರಲಿಲ್ಲ. ರಾಷ್ಟ್ರೀಯತೆ ಇಲ್ಲದಿದ್ದರೆ ರಾಷ್ಟ್ರದ ಅಸ್ತಿತ್ವವೇ ಇಲ್ಲ. ಅದನ್ನು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿದರು.
ಪೋರ್ಚುಗೀಸರೊಂದಿಗೆ ಹೋರಾಡಿ ಉಳ್ಳಾಲ ಕ್ಷೇತ್ರದ ಜನರ ಸ್ವಾತಂತ್ರ್ಯ ಕಾಪಾಡಿದ ವೀರ ಮಹಿಳೆ ರಾಣಿ ಅಬ್ಬಕ್ಕ. ತಿರಂಗಾ ಯಾತ್ರೆಯ ಮೂಲಕ ಉಳ್ಳಾಲದ ರಾಣಿ ಅಬ್ಬಕ್ಕ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ರಾಷ್ಟ್ರಪ್ರೇಮವನ್ನು ದೇಶದ ಮುಂದಿರಿಸುವ ಕೆಲಸ ಮಾಡಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸ್ವಾತಂತ್ರ್ಯ ದೊರೆತು 70 ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಮಾಡುವ ಕಾರ್ಯಕ್ರಮ ನಡೆದಿಲ್ಲ. ಈ ನಿಟ್ಟಿನಲ್ಲಿ ದೇಶದ ಪ್ರಮುಖ 100 ಕ್ಷೇತ್ರಗಳಲ್ಲಿ ಕೇಂದ್ರ ಸಚಿವರುಗಳೇ ತೆರಳಿ ತಿರಂಗಾ ಯಾತ್ರೆ ನಡೆಸುವ ವಿನೂತನ ಕಾರ್ಯಕ್ರಮವನ್ನು ನರೇಂದ್ರ ಮೋದಿ ರೂಪಿಸಿದ್ದಾರೆ ಎಂದರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕರ ಮನೆತನದ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಚೌಟರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ವಿನಯ ಹೆಗ್ಡೆ, ಸಂಸದ ನಳಿನ್ ಕುಮಾರ್ ಕಟೀಲು , ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ ರಾವ್, ವಿಧಾನಪರಿಷತ್ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಹರೀಶ್ ಪೂಂಜ, ಬಿಜೆಪಿ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಸಂದೇಶ್ ಶೆಟ್ಟಿ, ಹರೀಶ್ ಮೂಡುಶೆಡ್ಡೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಸಕ ಎಸ್. ಅಂಗರ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ವಂದಿಸಿದರು.