ರಮ್ಯಾಗೆ ಮೊಟ್ಟೆ, ಚಪ್ಪಲಿ ಎಸೆತ ಪ್ರಕರಣ: ಎಂಟು ಮಂದಿ ಬಂಧನ
ಮಂಗಳೂರು, ಆ. 27: ಕದ್ರಿಯಲ್ಲಿ ಗುರುವಾರ ಮೊಸರು ಕುಡಿಕೆ ಉತ್ಸವ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರನಟಿ ಹಾಗೂ ಮಾಜಿ ಸಂಸದೆ ರಮ್ಯಾರಿಗೆ ಮೊಟ್ಟೆ, ಚಪ್ಪಲಿ ಎಸೆತ ಮತ್ತು ಭಯದ ವಾತಾವರಣ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಮ್ಯಾ ಆಸೀನರಾದ ವೇದಿಕೆಗೆ ಮೊಟ್ಟೆ ಹಾಗೂ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್ ಪಂಪ್ವೆಲ್, ಪ್ರಶಾಂತ್ ಮತ್ತು ಸುಜಿತ್ನನ್ನು ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಭೀತಿಯ ವಾತಾವರಣ ನಿರ್ಮಿಸಿದ್ದ ಪ್ರಕರಣದಲ್ಲಿ ಭರತ್ ಸೇರಿದಂತೆ ಒಟ್ಟು 8ಮಂದಿಯನ್ನು ಬಂಧಿಸಲಾಗಿದೆ.
ಸಂದೀಪ್ ಪಂಪ್ವೆಲ್, ಸುಭಾಷ್ ಪಡೀಲ್ ಮತ್ತು ಇತರರ ಮೇಲೆ ಮೊಟ್ಟೆ ಎಸೆತ ಪ್ರಕರಣ ದಾಖಲಾಗಿದ್ದರೆ, ಭರತ್, ಕೀರ್ತನ್, ಹೇಮಚಂದ್ರ, ಸಂಜಯ, ರಂಜಿತ್, ಪ್ರದೀಪ್ ಮತ್ತು ಇತರರ ಮೇಲೆ ಭಯದ ವಾತಾವರಣ ಸೃಷ್ಟಿಸಿ ರಮ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಡ್ಡಿ ಉಂಟು ಮಾಡಿದ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳನ್ನು ಕದ್ರಿ ಇನ್ಸ್ಪೆಕ್ಟರ್ ಹಾಗೂ ಪಿಎಸ್ಸೈ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದರು.