ಬುಡೋಳಿ: ನಿಯಂತ್ರಣ ತಪ್ಪಿ ಗುಡ್ಡಕ್ಕೆ ಢಿಕ್ಕಿ ಹೊಡೆದ ಬಸ್
ಬಂಟ್ವಾಳ, ಸೆ.2: ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸೊಂದು ರಸ್ತೆ ಬದಿಯ ಗುಡ್ಡಕ್ಕೆ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಸಂಭವಿಸಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸೌಮ್ಯ ಹೆಸರಿನ ಖಾಸಗಿ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಭಾಗಕ್ಕೆ ಸರಿದು ಗುಡ್ಡಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಬಸ್ ಚಾಲಕ ಐವನ್ ಹಾಗೂ ಇಬ್ಬರು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡಿದ್ದು ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಿತಿ ಮೀರಿದ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಬಸ್ಸನ್ನು ನಿಧಾನವಾಗಿ ಚಲಾಯಿಸುವಂತೆ ಬಸ್ ನಿರ್ವಾಹಕ ಚಾಲಕನ ಬಳಿ ಹಲವು ಬಾರಿ ವಿನಂತಿಸಿದ್ದ ಎಂದು ನಿರ್ವಾಹಕ ತಿಳಿಸಿದ್ದಾನೆ ಎಂದು ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಎಎಸ್ಪಿ ರಿಷ್ಯಂತ್, ಪುತ್ತೂರ್ ಸಂಚಾರಿ ಎಸೈ ನಾಗರಾಜ್, ಉಪ್ಪಿನಂಗಡಿ ಎಸೈ, ಬಂಟ್ವಾಳ ಎಸೈ ನಂದಕುಮಾರ್, ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.