ಜನವಸತಿ ಇರುವಲ್ಲಿ ತ್ಯಾಜ್ಯ ವಾಹನ ಪಾರ್ಕಿಂಗ್: ಆ್ಯಂಟನಿ ವೇಸ್ಟ್ ವಿರುದ್ಧ ಪ್ರತಿಭಟನೆ
ಮಂಗಳೂರು, ಸೆ.4: ಮನಪಾದ ತ್ಯಾಜ್ಯ ನಿರ್ವಹಣೆ ಗುತ್ತಿಗೆ ಕಂಪೆನಿಯಾಗಿರುವ ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈ. ಲಿ.ನ ವಾಹನಗಳು ಜನವಸತಿ ಪರಿಸರದಲ್ಲಿ ಪಾರ್ಕಿಂಗ್ ಮಾಡುತ್ತಿರುವುದನ್ನು ವಿರೋಧಿಸಿ ಬಂಗ್ರಕೂಳೂರು ದೊಡ್ಡಮನೆ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.
ಆ್ಯಂಟನಿ ವೇಸ್ಟ್ ಕಂಪೆನಿಯ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಾಟದ ವಾಹನಗಳು ಜನವಸತಿ ಪ್ರದೇಶವಾದ ದೊಡ್ಡಮನೆ ವ್ಯಾಪ್ತಿಯ 1.05 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುತ್ತಿವೆ. ಅಲ್ಲದೆ ಈ ವಾಹನಗಳನ್ನು ಇಲ್ಲೇ ಸ್ವಚ್ಛಗೊಳಿಸುವುದರಿಂದ ಪರಿಸರ ಮಲಿನವಾಗುತ್ತಿದೆ. ಇದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಂದು ಮುಂಜಾನೆ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ವಾಹನಗಳು ಬರು ತ್ತಿರುವಂತೆ ಗ್ರಾಮ ಸ್ಥರು ಅದನ್ನು ತಡೆದು ನಿಲ್ಲಿಸಿದರು. ಈ ಸಂದರ್ಭ ಆ್ಯಂಟನಿ ವೇಸ್ಟ್ನ ವಾಹನ ನಿರ್ವಹಣಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆ ಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾವೂರು ಠಾಣಾ ನಿರೀಕ್ಷಕ ನಟರಾಜ್ ಪ್ರತಿಭಟನಾಕಾರರ ಮನ ವೊಲಿಸಿ ವಾಹನಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಿದರು.
ಈ ಹಿಂದೆ 130 ಘನತ್ಯಾಜ್ಯ ವಾಹನ ಗಳು ಇದ್ದು, ಇದೀಗ ಇದಕ್ಕೆ ಮತ್ತೆ 37 ವಾಹನಗಳು ಸೇರ್ಪಡೆಯಾಗಿವೆ. ಈ ವಾಹನಗಳ ಸ್ವಚ್ಛತೆ ಸಾರ್ವಜನಿಕ ಓಡಾಟ ಪ್ರದೇಶದಲ್ಲಿಯೇ ನಡೆಯುತ್ತಿದೆ. ಈ ವಾಹನದಲ್ಲಿ ದುಡಿಯುತ್ತಿರುವ ಹೊರ ಜಿಲ್ಲೆಯ ಕಾರ್ಮಿಕರು ಕಳ್ಳತನ, ಗಾಂಜಾ ವ್ಯವಹಾರಗಳಂತಹ ಸಮಾಜಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇವೆಲ್ಲ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ತಂದೊಡ್ಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಸ್ಯೆ ಶೀಘ್ರ ಈಡೇರಿಸದಿದ್ದರೆ ಪಾಲಿಕೆ ಹಾಗೂ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.