ಬೆಳ್ತಂಗಡಿ: 1000ನೇ ಮದ್ಯವರ್ಜನ ಶಿಬಿರ
ಬೆಳ್ತಂಗಡಿ,ಸೆ.24: ಮನುಷ್ಯನಾಗಿ ಹುಟ್ಟಿ ಮನುಷ್ಯನಾಗಿ ಬದುಕಿ, ಸಾಯಬೇಕು ಹೊರತು ಪ್ರಾಣಿಯಾಗಿ ಸಾಯಬಾರದು. ಮದ್ಯಪಾನ ಎಂಬುದು ಮನುಷ್ಯನನ್ನು ಪ್ರಾಣಿಯನ್ನಾಗಿ ಮಾಡುತ್ತದೆ. ಹಾಗಾಗಿ ಮದ್ಯಪಾನವನ್ನು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಕುಟುಂಬದ ಉದ್ಧಾರವನ್ನು ಮಾಡುವುದರಿಂದ ಸಮಾಜದಲ್ಲಿ ಉತ್ತಮ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಮಂಜುನಾಥಸ್ವಾಮಿ ಕಲಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ, ಸಿಯೋನ್ ಆಶ್ರಮ ಟ್ರಸ್ಟ್, ರೈತ ಬಂಧು ಆಹಾರೋದ್ಯಮ, ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘ, ಸಿಂಡಿಕೇಟ್ ಬ್ಯಾಂಕ್ ಬೆಳ್ತಂಗಡಿ, ಶ್ರೀ ವಿನಾಯಕ ರೈಸ್ ಇಂಡಸ್ಟ್ರೀಸ್, ವಕೀಲರ ಸಂಘ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ 1000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಮದ್ಯವ್ಯಸನಿಗಳನ್ನು ಮದ್ಯಮುಕ್ತರನ್ನಾಗಿ ಮಾಡಿಸಿ, ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಕಲ್ಪಿಸುವುದು ಶ್ರೇಷ್ಠ ಕೆಲಸ. ಜೀವನದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಲು ಮದ್ಯವ್ಯಸನಿಗಳಿಗೆ ಅವಕಾಶವೊದಗಿಸಿದೆ ಎಂದರು.
ಶಿಬಿರವನ್ನು ರೈತಬಂಧು ಆಹಾರೋದ್ಯಮದ ಶಿವಶಂಕರ್ ನಾಯಕ್ ಉದ್ಘಾಟಿಸಿದರು. ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಮಾತನಾಡಿ ಶುಭ ಹಾರೈಸಿದರು. ಗಂಡಿಬಾಗಿಲು ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಯು.ಸಿ. ಪೌಲೋಸ್, ಯೋಜನೆ ಜಿಲ್ಲಾ ನಿರ್ದೇಶಕ ಕೆ. ಚಂದ್ರಶೇಖರ್, ಜನ ಜಾಗೃತಿ ವೇದಿಕೆ ತಾ ಅಧ್ಯಕ್ಷ ಕಿಶೋರ್ ಹೆಗ್ಡೆ, ವಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ವಿಜಯರಾಜ ಅಧಿಕಾರಿ, ಜಗದೀಶ್ ಡಿ., ಪುಷ್ಪರಾಜ್ ಹೆಗ್ಡೆ ಮಡಂತ್ಯಾರು, ಇ. ಸುಂದರ ಗೌಡ, ಮೋಹನ್ ಶೆಟ್ಟಿಗಾರ್, ಶ್ರೀನಿವಾಸ ಗೌಡ, ವಸಂತ ಶೆಟ್ಟಿ, ಚಿದಾನಂದ ಇಡ್ಯ, ಸಂತೋಷ್ ಕುಮಾರ್ ಕಾಪಿನಡ್ಕ, ಸಂತೋಷ್ ಕುಮಾರ್ ಜೈನ್, ವೃಷಭ ಆರಿಗ ಇದ್ದರು.
ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿ. ಪಾಸ್ ಪ್ರಸ್ತಾವಿಸಿದರು. ಬೆಳ್ತಂಗಡಿ ತಾ ಯೋಜನಾಧಿಕಾರಿ ರೂಪಾ ಜೈನ್ ಸ್ವಾಗತಿಸಿದರು. ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್ ಗೌಡ ಕಾರ್ಯಕ್ರಮ ನಿರ್ವಹಿಸಿ, ಉಜಿರೆ ವಲಯ ಮೇಲ್ವಿಚಾರಕ ಸತೀಶ್ ಯು ವಂದಿಸಿದರು.