ಸೀತಾಂಗೋಳಿಯಲ್ಲಿ ಬೃಹತ್ ರಕ್ತದಾನ ಶಿಬಿರ
ಕಾಸರಗೋಡು, ಸೆ.27: ಬ್ಲಡ್ ಡೋನೋರ್ಸ್ ಮಂಗಳೂರು ಮತ್ತು ಜನರಕ್ಷಾ ಸೀತಂಗೋಳಿ ಇದರ ಜಂಟಿ ಸಹಭಾಗಿತ್ವದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಯ ಸಹಕಾರದೊಂದಿಗೆ " ಬೃಹತ್ ರಕ್ತದಾನ ಶಿಬಿರ" ಹಾಗೂ ರಕ್ತದಾನದ ಬಗ್ಗೆ ಅರಿವು ನೀಡುವ ಕಾರ್ಯಕ್ರಮ ಸೀತಾಂಗೋಳಿಯ ಮಾಡೆಲ್ ಕ್ಲಿನಿಕ್ ನಲ್ಲಿ ನಡೆಯಿತು.
ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ವೈದ್ಯ ಡಾ.ಎಸ್.ಯು. ಅಬ್ದುಲ್ಲಾ ಮಾತನಾಡಿ, ರಕ್ತದಾನದ ಬಗ್ಗೆ ಮತ್ತು ಅದರ ಶ್ರೇಷ್ಠತೆ ಬಗ್ಗೆ ಅರಿವು ಮೂಡಿಸುವ ಇಂತಹ ಸಂಘಟನೆಗಳ ಕಾರ್ಯ ಶ್ಲಾಘನೀಯ. ಪ್ರಸ್ತುತ ರಕ್ತದ ಅಗತ್ಯ ಹೆಚ್ಚು ಇದೆ. ನಿರೀಕ್ಷೆಗೆ ತಕ್ಕಂತೆ ರಕ್ತ ಸಿಗುತ್ತಿಲ್ಲ. ಇದರಿಂದ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ರಕ್ತದಾನಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಮೂಡಿಸುವ ಅಗತ್ಯ ಹೆಚ್ಚಿದೆ ಎಂದು ಹೇಳಿದರು.
ನಂತರ ಮಾತನಾಡಿದ ಎ.ಕೆ.ಎಂ. ಅಶ್ರಫ್, ರಕ್ತದಾನ ಅತ್ಯಂತ ಪವಿತ್ರವಾದದ್ದು. ರಕ್ತದಾನ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎನ್ನುವ ಮನೋಭಾವ ಮನಸ್ಸಿನಿಂದ ತೆಗೆದು ಹಾಕಿ. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ನೆರವಿಗೆ ಧಾವಿಸುವ ಪಣ ತೊಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬ್ಲಡ್ ಡೋನರ್ಸ್ ತಂಡದ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಗ್ರಾಮ ಪಂಚಾಯತ್ ಸದಸ್ಯ ಕೆ.ಎನ್. ಕೃಷ್ಣ ಭಟ್ , ಪುತ್ತಿಗೆ ಪಂಚಾಯತ್ ಸದಸ್ಯ ಅರುಣ್, ಅನಂತ ಪದ್ಮನಾಭ ಕ್ಷೇತ್ರದ ಅಧ್ಯಕ್ಷ ಮಾಧವ ನಾಯರ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ. ಸುಲೈಮಾನ್ ಹಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು ೬೦ ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ನಾಸಿರ್ ಬಾಯಾರ್ ಸ್ವಾಗತಿಸಿದರು ನಾಸಿರ್ ವಂದಿಸಿದರು.
ವರದಿ:- ಶಾಹುಲ್ ಹಮೀದ್ ಕಾಶಿಪಟ್ಣ