ಮರಳು ನಿಷೇಧ ಹಿಂತೆಗೆಯಲು ಆಗ್ರಹಿಸಿ ಬಿಜೆಪಿಯಿಂದ ಧರಣಿ
ಮಂಗಳೂರು, ಸೆ.27: ಜಿಲ್ಲಾಡಳಿಯ ಮರಳು ನಿಷೇಧ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬಿಜೆಪಿಯ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಧರಣಿ ನಡೆಯಿತು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ ಕಾಮತ್ ಮಾತನಾಡಿ, 3 ವರ್ಷಗಳ ಹಿಂದೆ 93ರಷ್ಟಿದ್ದ ಮರಳುಗಾರರ ಪರವಾನಿಗೆ 427ಕ್ಕೆ ಏರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು. ಅಕ್ರಮವಾಗಿ ಮರಳುಗಾರಿಕೆಗೆ ಪರವಾನಿಗೆ ನೀಡಿರುವುದರಿಂದ ಸಾಂಪ್ರದಾಯಿಕ ಮರಳುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಲಭವಾಗಿ ಸಿಗುತ್ತಿದ್ದ ಜಿಲ್ಲೆಯ ಪ್ರಾಕೃತಿಕ ಸಂಪತ್ತಾದ ಮರಳನ್ನು ಇವತ್ತು ಚಿನ್ನದಂತೆ ಖರೀದಿ ಮಾಡುವ ಪರಿಸ್ಥಿತಿ ಏರ್ಪಟ್ಟಿದೆ ಎಂದು ಅವರು ಹೇಳಿದರು.
ಉದ್ಯಮಿ ಜಿತೇಂದ್ರ ಕೊಟ್ಟಾರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಊರಾದ ಬಂಟ್ವಾಳದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿದೆ ಎಂದು ಆಪಾದಿಸಿದರು. ವಿಧಾನ ಪರಿಷತ್ನ ಮಾಜಿ ಸಭಾಪತಿ ಯೋಗೀಶ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಬ್ರಿಜೇಶ್ ಚೌಟ, ರವಿಶಂಕರ್ ಮಿಜಾರು, ಹರೀಶ್ ಪೂಂಜಾ, ಭಾಸ್ಕರ್ಚಂದ್ರಶೆಟ್ಟಿ, ರೂಪಾ ಡಿ. ಬಂಗೇರಾ, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಮೀರಾ ಕರ್ಕೇರಾ, ನಿತಿನ್ ಕುಮಾರ್, ರಾಮಚಂದ್ರ ಬೈಕಂಪಾಡಿ, ಪೂಜಾ ಪೈಘಿ, ಕನ್ನಡ ಕಟ್ಟೆ ಸಂಘಟನೆಯ ಅಣ್ಣಯ್ಯ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಧರಣಿಯ ಬಳಿಕ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಯಿತು.