ಶರನ್ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮ
ನಾ.ಡಿಸೋಜ, ನಿಸಾರ್ ಅಹ್ಮದ್, ಡಾ.ಸಿ.ಎನ್.ರಾಮಚಂದ್ರನ್ ಉಪಸ್ಥಿತಿ
ಉಡುಪಿ, ಸೆ.30: ಶರನ್ನವರಾತ್ರಿ ಪ್ರಯುಕ್ತ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿ ಕಾರ್ಯಕ್ರಮ ಅ.4ರಿಂದ 9ರವರೆಗೆ ಪ್ರತಿದಿನ ಸಂಜೆ 5ರಿಂದ 7ರವರೆಗೆ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಅ.4ರಂದು ಸಂಜೆ ಮುಜರಾಯಿ ಸಚಿವ ರುದ್ರಪ್ಪಲಮಾಣಿ ಉದ್ಘಾಟಿಸಲಿದ್ದಾರೆ. ಅದೇ ದಿನ ಪ್ರಗತಿಪರ ಚಿಂತಕ, ಡಾ.ಸಿದ್ದಲಿಂಗಯ್ಯ ‘ಮಾತನಾಡುವ ದೇವರುಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಡಾ. ತಾಳ್ತಜೆ ವಸಂತಕುಮಾರ ‘ನಮ್ಮ ಪರಿಸರ’ ವಿಷಯದ ಕುರಿತು ಮಾತನಾಡುವರು. ಅ.5ರಂದು ಕವಿ ದೊಡ್ಡರಂಗೇ ಗೌಡ ‘ಜಾನಪದ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಪತ್ರಕರ್ತೆ ಸಂಧ್ಯಾ ಎಸ್. ಪೈ ‘ಸರಳ ಸಾಹಿತ್ಯ, ಕತೆಗಳ ಮೂಲಕ’ ವಿಷಯದಲ್ಲಿ ಉಪನ್ಯಾಸ ನೀಡುವರು. ಅ.6ರಂದು ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ನಾ.ಡಿಸೋಜ ‘ಸಾಹಿತ್ಯ ಮತ್ತು ಸಮನ್ವಯತೆ’ ಎನ್ನುವ ವಿಷಯದ ಬಗ್ಗೆ ಹಾಗೂ ಪ್ರವಚನಕಾರ ಆದರ್ಶ ಗೋಖಲೆ ‘ಸಾಹಿತ್ಯ ಮತ್ತು ರಾಷ್ಟ್ರೀಯತೆ’ ಕುರಿತು ಉಪನ್ಯಾಸ ನೀಡುವರು. ಅ.7ರಂದು ಹಿರಿಯ ಕವಿ ಹಾಗೂ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ‘ಕವಿತೆ ಎಂಬ ವಿಸ್ಮಯ’ದ ಬಗ್ಗೆ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ‘ಪತ್ರಿಕೋದ್ಯಮ ಮತ್ತು ಸಮಾಜ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಅ.8ರಂದು ಪ್ರಸಿದ್ಧ ಕವಿ, ವೈಚಾರಿಕ ಬರಹಗಾರ, ವಿಮರ್ಶಕ ಪದ್ಮಶ್ರೀ ಪುರಸ್ಕೃತ ನಾಡೋಜ ಕೆ.ಎಸ್. ನಿಸಾರ್ ಅಹ್ಮದ್ ‘ನನ್ನ ಲೇಖನ ಉದ್ಯಮ’ ಸ್ವಕೃತಿಗಳ ವಾಚನ ಎಂಬ ವಿಷಯದ ಬಗ್ಗೆ ಹಾಗೂ ವಿಮರ್ಶಕ, ವಿದ್ವಾಂಸರಾದ ಡಾ.ಸಿ.ಎನ್.ರಾಮಚಂದ್ರನ್ ‘ಸ್ತೋತ್ರ ಸಾಹಿತ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು.
ಅ.9ರಂದು ಸಂಜೆ ಹಾಸ್ಯ ಸಾಹಿತ್ಯ ‘ನುಡಿ ಮಲ್ಲಿಗೆ-ನಗೆ ಹೋಳಿಗೆ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.