ಬಸ್-ರಿಕ್ಷಾ ಢಿಕ್ಕಿ: ಸಹೋದರರಿಬ್ಬರು ಮೃತ್ಯು
ಹೆಬ್ರಿ, ಅ.3: ಶಿವಪುರ ಗ್ರಾಮದ ಬಿಲ್ಬೈಲ್ ಸೇತುವೆ ಬಳಿ ಅ.2ರಂದು ಸಂಜೆ 4ಗಂಟೆ ಸುಮಾರಿಗೆ ರಿಕ್ಷಾವೊಂದಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಸಹೋದರರಿಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಶಿವಪುರದ ನಿವಾಸಿ ರಿಕ್ಷಾ ಚಾಲಕ ಗುರುಪ್ರಸಾದ್(29) ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅವರ ಅಣ್ಣ ವಸಂತ ಎಂದು ಗುರುತಿಸಲಾಗಿದೆ.
ಶಿವಪುರ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಎದುರಿನಿಂದ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಸಹಕಾರ ಮಿನಿ ಸಾರಿಗೆ ಬಸ್ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡು ಗುರುಪ್ರಸಾದ್ ಹಾಗೂ ವಸಂತ ಗಂಭೀರವಾಗಿ ಗಾಯಗೊಂಡರು. ಇವರಲ್ಲಿ ಗುರುಪ್ರಸಾದ್ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆ, ವಸಂತ್ ರಾತ್ರಿ 8ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ವಸಂತ್ ವಿವಾಹಿತರಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story