ವಸತಿ ರಹಿತರಿಗೆ ಸುವ್ಯವಸ್ಥಿತ ಕಟ್ಟಡ: ಪ್ರಮೋದ್
ಉಡುಪಿ, ಅ.4: ನಗರದ ವಸತಿರಹಿತರಿಗೆ ಶಾಶ್ವತ ಆಶ್ರಯ ಸೌಲಭ್ಯವನ್ನು ಒದಗಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದ್ದು, ಕಟ್ಟಡವನ್ನು ಉತ್ತಮವಾಗಿ, ಸುವ್ಯವಸ್ಥಿತವಾಗಿ ಕಟ್ಟಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬೀಡಿನಗುಡ್ಡೆಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ವಸತಿ ರಹಿತರ ಆಶ್ರಯತಾಣದ ಶಾಶ್ವತ ಕಟ್ಟಡಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ದೀನದಯಾಳ್ ಅಂತ್ಯೋದಯ ಯೋಜನೆ, ಜೀವನೋಪಾಯ ಅಭಿಯಾನ ಯೋಜನೆಯಡಿ ನಗರ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಎಲ್ಲಾ ಮೂಲಭೂತ ಸೌಲಭ್ಯ ಹಾಗೂ ಸೌಕರ್ಯಗಳನ್ನು ಹೊಂದಿರುವ ಮನೆ ನಿರ್ಮಾಣಗೊಳ್ಳಲಿದೆ. ದುರ್ಬಲ ವರ್ಗದವರು, ಒಂಟಿ ಮಹಿಳೆಯರು, ಮಾನಸಿಕ ಅಸ್ವಸ್ಥರು, ವೃದ್ಧರಿಗೆ ಇದರಲ್ಲಿ ಸೌಕರ್ಯ ಕಲ್ಪಿಸಲಾಗುವುದು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಸದಸ್ಯರಾದ ವಿಜಯ ಮಂಚಿ, ಶಶಿರಾಜ್ ಕುಂದರ್, ನಾರಾಯಣ ಕುಂದರ್, ಪ್ರಶಾಂತ್ ಭಟ್, ಜನಾರ್ದನ ಭಂಡಾರ್ಕರ್, ಗಣೇಶ್ ನೆರ್ಗಿ, ಶಾಂತಾರಾಂ ಸಾಲ್ವಂಕರ್, ಹಸನ್ ಸಾಹೇಬ್, ಪೌರಾಯುಕ್ತ ಮಂಜುನಾಥಯ್ಯ ಉಪಸ್ಥಿತರಿದ್ದರು.