ಅಪಘಾತದಿಂದ ಮೆದುಳು ನಿಷ್ಕ್ರಿಯ: ವಿದ್ಯಾರ್ಥಿಯ ಅಂಗಾಂಗ ದಾನಕ್ಕೆ ನಿರ್ಧಾರ
ಮಣಿಪಾಲ, ಅ.9: ಮಣ್ಣಪಳ್ಳ ಗೇಟ್ ಎದುರು ಅ.8ರಂದು ಸಂಜೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬ್ರೈನ್ ಡೆಡ್ ಆಗಿರುವ ಬೈಂದೂರಿನ ಹಿಮಾಂಶು (16) ಎಂಬವರ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದಾರೆ.
ಬೈಂದೂರಿನ ಡಾ.ರವಿರಾಜ್ ಮತ್ತು ಸುಜಾತ ದಂಪತಿ ಪುತ್ರರಾಗಿರುವ ಹಿಮಾಂಶು ಉಡುಪಿಯ ಮಹೇಶ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿರುವ ಹಿಮಾಂಶು ಅವರ ಕಿಡ್ನಿ, ಕಾರ್ನಿಯಾ ಮತ್ತು ಲಿವರ್ಗಳನ್ನು ದಾನ ಮಾಡಲಾಗಿದೆ. ನಾಳೆ ಬೆಳಗ್ಗೆ 6ಗಂಟೆಗೆ ಝಿರೋ ಟ್ರಾಫಿಕ್ನಲ್ಲಿ ಅಂಗಾಂಗಗಳು ಬೆಂಗಳೂರಿಗೆ ರವಾನೆಯಾಗಲಿದೆ. ಮಣ್ಣಪಳ್ಳ ಗಣಪತಿ ದೇವಸ್ಥಾನದಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಉಡುಪಿಯ ಹರ್ಷಿತ್ ಬಿರ್ವಾ(19) ಹಾಗೂ ಸಹ ಸವಾರ ಹಿಮಾಂಶು ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ಹರ್ಷಿತ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟರು. ಹರ್ಷಿತ್ ಬಂಟಕಲ್ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.