ಪಿಐಎಂನ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ
ಉಡುಪಿ, ಅ.14: ಆತ್ಮಸ್ಥೈರ್ಯ ಹಾಗೂ ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ವಿದ್ಯಾಸಂಸ್ಥೆಯಿಂದ ಪಡೆದೆ ಎಂದು ಹಳೆ ವಿದ್ಯಾರ್ಥಿಗಳು ಹೇಳುವುದೇ ಸಂಸ್ಥೆಯ ಸಾಪಲ್ಯಕ್ಕೆ ಸಾಕ್ಷಿ ಎಂದು ಉಡುಪಿ ಶ್ರೀಅದಮಾರು ಮಠದ ಪೀಠಾಧಿಪತಿ ಹಾಗೂ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ರೂಪು ಗೊಂಡ ಹಳೆವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಸಾಲಿನ ಅಂತಿಮ ಎಂಬಿಎ ವಿದ್ಯಾರ್ಥಿಗಳೂ ಸೇರಿದಂತೆ, ಈವರೆಗಿನ ಹತ್ತು ಎಂಬಿಎ ತಂಡಗಳ 600 ವಿದ್ಯಾರ್ಥಿಗಳ ಹೆಸರು, ವಿಳಾಸ, ಇಮೇಲ್ ಐಡಿ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನೊಳಗೊಂಡ ಪುಸ್ತಕವನ್ನು ಈ ಸಂದರ್ಭದಲ್ಲಿ ಅದಮಾರು ಶ್ರೀಗಳು ಬಿಡುಗಡೆ ಮಾಡಿದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾಗಿ ನರಸಿಂಹ ಎಸ್.ಎಸ್., ಉಪಾಧ್ಯಕ್ಷರಾಗಿ ಗಿರೀಶ್ ಐತಾಳ್ ನಾಗೂರು ಹಾಗೂ ಪ್ರಮೋದ್ ಶೇಟ್, ಕಾರ್ಯದರ್ಶಿಯಾಗಿ ಡಯಾನ ಸಲ್ಡಾನಾ ಜೊತೆಕಾರ್ಯದರ್ಶಿಗಳಾಗಿ ಉಮೇಶ್ ಬಾಧ್ಯ ಹಾಗೂ ಸಂದೇಶ್ ಕುಮಾರ್ ನಿಯುಕ್ತಿಗೊಂಡರು. ಪಿಐಎಂನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಸಂಘಶಕ್ತಿಯಿಂದ ಎಲ್ಲವೂ ಸಾಧ್ಯ. ಈ ಸಂಘ ಪಿಐಎಂಗೆ ಇನ್ನೂ ಹೆಚ್ಚಿನ ಬಲ ಕೊಡಲು ಸಾಧ್ಯ ಎಂದರು.
ಪೂರ್ಣಪ್ರಜ್ಞ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಸಂಚಾಲಕ ಡಾ. ಕೃಷ್ಣ ಕೊತಾಯ ಶುಭ ಹಾರೈಸಿದರು. ಪಿಐಎಂ ನಿರ್ದೇಶಕ ಡಾ.ಎಂ.ಆರ್. ಹೆಗಡೆ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಉದ್ದೇಶಗಳನ್ನು ವಿವರಿಸಿದರು.