ಮೂಡುಬಿದಿರೆ: ಎಪಿಎಂಸಿ ಮಾರುಕಟ್ಟೆ ಏಲಂಗೆ ಕರ್ನಾಟಕ ರಾಜ್ಯ ರೈತ ಸಂಘ ವಿರೋಧ
ಮೂಡುಬಿದಿರೆ, ಅ.14: ರೈತರ ಹಿತಕ್ಕೋಸ್ಕರ ಕಟ್ಟಲಾಗಿರುವ ಎಪಿಎಂಸಿ ಮಾರುಕಟ್ಟೆಯು ಖಾಸಗಿಯವರ ಪಾಲಾಗುತ್ತಿದೆ ಎಂದು ಆರೋಪಿಸಿ ತಹಶೀಲ್ದಾರ್ ಹಾಗೂ ಪುರಸಭೆಗೆ ಮನವಿ ಕೊಡುವುದರ ಮೂಲಕ ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಗುರುವಾರ ಮನವಿ ಸಲ್ಲಿಸಿದೆ.
ಮೂಡುಬಿದಿರೆಯಲ್ಲಿ ಕೃಷಿಕರಿಗೆ ಅನುಕೂಲವಾಗುವಂತ ಯಾವುದೇ ವ್ಯವಸ್ಥೆಯನ್ನು ಸ್ಥಳೀಯಾಡಳಿತ ಮಾಡಿಕೊಡುತ್ತಿಲ್ಲ. ತೆಂಗಿನ ಗೋಡೌನ್, ಮೂಡುಬಿದಿರೆಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಹಾಪ್ಕಾಮ್ಸ್ ಮಳಿಗೆಗಳಿಗೆ ಸ್ಥಳಾವಕಾಶ ಅನಿವಾರ್ಯವಾಗಿದೆ. ಖಾಸಗಿಯವರಿಗೆ ಬಾಡಿಗೆ ನೀಡುವುದರ ಬದಲು ರೈತರ ಉತ್ಪನ್ನಗಳ ಮಾರಾಟಕ್ಕೆ ಹಾಗೂ ಗೋಡೌನ್ಗೆ ಉಚಿತವಾಗಿ ಸ್ಥಳಾವಕಾಶ ಮಾಡಿಕೊಡಬೇಕು. ಖಾಸಗಿಯವರಿಗೆ ಆದ ಏಲಂ ಅನ್ನು ರದ್ದುಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಹಾಗೂ ತಹಶೀಲ್ದಾರ್ ಮುಹಮ್ಮದ್ ಇಸಾಕ್ರಿಗೆ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಉಪಾಧ್ಯಕ್ಷ ರಘುರಾಮ್ ಶೆಟ್ಟಿ, ಕಾರ್ಯದರ್ಶಿ ಪೌಸ್ತೀನ್ ಸಿಕ್ವೇರಾ ಸಹಿತ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಿದರು.