ಮುಲ್ಕಿ ಬಸ್ ನಿಲ್ದಾಣಕ್ಕೆ 1.5 ಕೋ.ರೂ.: ಜೈನ್
ಮುಲ್ಕಿ, ಜ.1: ಮುಖ್ಯಮಂತ್ರಿಯವರ ಎಚ್ಎಫ್ಸಿ ಅನುದಾನದಿಂದ ಮುಲ್ಕಿ ಬಸ್ ನಿಲ್ದಾಣಕ್ಕೆ ಸುಮಾರು 1.5 ಕೋಟಿ ರೂ. ನೀಡುವ ಬಗ್ಗೆ ಸರಕಾರ ಭರವಸೆ ನೀಡಿದೆ ಎಂದು ಯುವಜನ ಸೇವೆ, ಕ್ರೀಡೆ ಸಚಿವ ಅಭಯಚಂದ್ರ ಜೈನ್ ತಿಳಿಸಿದರು.
ಮುಲ್ಕಿಯ ಕಾರ್ನಾಡ್ನ ಗಾಂಧಿ ಮೈದಾನದ ಬಳಿ ನಿರ್ಮಾಣಗೊಂಡ ವಿಶೇಷ ತಹಶೀಲ್ದಾರ್ರ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೂತನ ಸುಸಜ್ಜಿತ ಬಸ್ ನಿಲ್ದಾಣ ಸೇರಿದಂತೆ ಮುಲ್ಕಿ ಶೀಘ್ರವೇ ಸುಂದರ ನಗರವಾಗಿ ಮಾರ್ಪಡಲಿದೆ ಎಂದರು. ರಾಜ್ಯದಲ್ಲೇ ಮೊಟ್ಟಮೊದಲ ವಿಶೇಷ ತಹಶೀಲ್ದಾರ್ ನೇಮಕವಾಗಿರುವುದು ಮುಲ್ಕಿಯಲ್ಲಾಗಿದೆ ಎಂದ ಸಚಿವರು, ಜನತೆಯ ನಿರೀಕ್ಷೆಯಂತೆ ಬಪ್ಪನಾಡು ದೇವಸ್ಥಾನಕ್ಕೆ ಅಡ್ಡಿಯಾಗದಂತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ತಕ್ಷಣದಿಂದಲೇ ವಿಶೇಷ ತಹಶೀಲ್ದಾರ್ ಕಚೇರಿ ಕಾರ್ಯಾರಂಭಿಸಲಿದೆ ಎಂದರು.
ಸಮಾರಂಭದಲ್ಲಿ ಮುಲ್ಕಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ತಾಪಂ ಸದಸ್ಯೆ ಆಶಾ ತಿಮ್ಮಪ್ಪಗೌಡ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಆರ್.ಅಶೋಕ್, ಮುಲ್ಲಿ ವಿಶೇಷ ತಹಶೀಲ್ದಾರ್(ಪ್ರಭಾರ) ಮುಹಮ್ಮದ್ ಇಸ್ಹಾಕ್ ಮೊದಲಾದವರು ಉಪಸ್ಥಿತರಿದ್ದರು.