ಪುತ್ತೂರು: ಮನೆಯ ಬಾಗಿಲು ಮುರಿದು ಒಳನುಗ್ಗಿ ಮಗು ಸಹಿತ ದಂಪತಿ ಮೇಲೆ ಹಲ್ಲೆ
ಪುತ್ತೂರು, ಅ.22: ಮನೆಯೊಂದರ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಾಗಿಲು ಮುರಿದು ಒಳನುಗ್ಗಿದ ತಂಡವೊಂದು ಮೂರೂವರೆ ವರ್ಷದ ಮಗು ಸಹಿತ ದಂಪತಿ ಮೇಲೆ ಹಲ್ಲೆಗೈದು ದಾಂಧಲೆ ಎಬ್ಬಿಸಿದ ಘಟನೆ ಶುಕ್ರವಾರ ಮಧ್ಯರಾತ್ರಿಯ ವೇಳೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಓಜಾಲ ಎಂಬಲ್ಲಿ ನಡೆದಿದೆ.
ಕೊಡಿಪ್ಪಾಡಿ ಗ್ರಾಮದ ಓಜಾಲ ನಿವಾಸಿ ಕೃಷ್ಣ (31), ಅವರ ಪತ್ನಿ ಮಮತಾ (28) ಮತ್ತು ಅವರ ಮೂರೂವರೆ ವರ್ಷ ಪ್ರಾಯದ ಪುತ್ರಿ ತೃಶ್ಯಾ ಹಲ್ಲೆಗೊಳಗಾದವರು. ಗಾಯಾಳುಗಳನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಮಧ್ಯರಾತ್ರಿ ಒಂದೂವರೆ ಗಂಟೆಯ ವೇಳೆಗೆ 4 ಬೈಕ್ಗಳಲ್ಲಿ ಬಂದ ತಂಡವೊಂದು ಏಕಾಏಕಿಯಾಗಿ ಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆಯೊಳಗಿದ್ದ ಕೃಷ್ಣ , ಅವರ ಪತ್ನಿ ಮಮತಾ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮಗುವನ್ನು ದೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ. ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ಮತ್ತು ಬೈಕೊಂದಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ಪರಿಸರದವರಾದ ರಾಮದಾಸ್, ದಿನೇಶ್, ರಾಜೀವ, ಸಮಿತ್ ಮತ್ತಿತರ ಒಟ್ಟು 10 ಮಂದಿ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಕೃಷ್ಣ ಅವರು ಆರೋಪಿಸಿದ್ದಾರೆ. ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.