ಮರಳು ಗುತ್ತಿಗೆದಾರರ ವಿರುದ್ಧವೇ ಮೊಕದ್ದಮೆ: ಡಿಸಿ ಎಚ್ಚರಿಕೆ
ಮಂಗಳೂರು, ಅ. 27: ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಇಲಾಖಾಧಿಕಾರಿಗಳು, ಪೊಲೀಸರು ದಾಳಿ ನಡೆಸಿದಾಗ ಉಂಟಾಗುವ ಅನಪೇಕ್ಷಿತ ಘಟನೆಗೆ ಅಲ್ಲಿನ ಅಕ್ರಮ ಮರಳುಗಾರಿಕೆ ನಡೆಸುವ ಗುತ್ತಿಗೆದಾರರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣ ಮಟ್ಟಹಾಕಲು ಜಿಲ್ಲಾಡಳಿತ ಬದ್ಧವಾಗಿದೆ. ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡುವವರು ಹೆಸರನ್ನು ಗುಪ್ತವಾಗಿಡಲಾಗುವುದು ಅಲ್ಲದೇ ಅಗತ್ಯವೆನಿಸಿದರೆ ರಕ್ಷಣೆ ನೀಡಲು ಕೂಡಾ ಜಿಲ್ಲಾಡಳಿತ ಸಿದ್ದವಿದೆ ಎಂದರು.
ಬಂಟ್ವಾಳದಲ್ಲಿ ನಡೆದ ಶರೀಫ್ ಸಾವಿನ ಕುರಿತು ತನಿಖೆ ನಡೆಯಲಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ನೀಡಲು ಅವಕಾಶ ಇಲ್ಲ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವ ಕುರಿತು ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.