ನೀಲಾವರ ಚೈತನ್ಯ ಯುವಕ ಮಂಡಲದಲ್ಲಿ ರಾಜ್ಯೋತ್ಸವ
ಬ್ರಹ್ಮಾವರ, ನ.2: ತುಳು ಹಾಗೂ ಕನ್ನಡ ಭಾಷೆಗೆ ದ್ರಾವಿಡ ಭಾಷೆಗಳಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಉಳಿದ ರಾಜ್ಯಗಳು ಕೇವಲ ಒಂದು ಭಾಷೆ ಹೊಂದಿದ್ದರೆ, ರಾಜ್ಯದಲ್ಲಿ ತುಳು ಮತ್ತು ಕನ್ನಡ ಈ ಎರಡು ಭಾಷೆಗಳು ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇರುವುದು ಇನ್ನೊಂದು ವಿಶೇಷ. ಆದ್ದರಿಂದ ಇವುಗಳನ್ನು ಗೌರವಿಸಬೇಕಾಗಿರುವ ನಮ್ಮ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ನೀಲಾವರ ಮಹಿಷಮರ್ಧಿನಿ ದೇವಸ್ಥಾನದ ವಠಾರದಲ್ಲಿ ಮಂಗಳವಾರ ನೀಲಾವರ ಚೈತನ್ಯ ಯುವಕ ಮಂಡಲದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಯುವಕ ಮಂಡಲದ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ನೀಲಾವರ ಗ್ರಾಪಂ ಅಧ್ಯಕ್ಷೆ ಆಶಾ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾಸ್ಕರ್ ನಾಯಕ್, ಮಂಜುನಾಥ ಶೆಟ್ಟಿಗಾರ್, ಸ್ಟೀವನ್ ಪ್ರಕಾಶ್ ಲೂಯಿಸ್, ನೀಲಾವರ ಸುರೇಂದ್ರ ಅಡಿಗ, ಕರುಣಾಕರ ನೀಲಾವರ, ವಿಷ್ಣುಮೂರ್ತಿ ಬಾಸ್ರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ತಿಕ್ ಪ್ರಭು, ಅರುಣಾ ರೀನಾ ಡಿಸೋಜಾ, ಅಪೂರ್ವ ರಾವ್ ಇವರನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ ರಾವ್, ನೀಲಾವರ ಗ್ರಾಪಂ ಉಪಾಧ್ಯಕ್ಷ ರಮೇಶ್ ಪೂಜಾರಿ, ಕೆಡಿಪಿ ಸದಸ್ಯ ಉಮೇಶ್ ನಾಯ್ಕ ಚೇರ್ಕಾಡಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬಾಲವಿಕಾಸ ಅಕಾಡೆಮಿಯ ಸದಸ್ಯ ತಿಮ್ಮಪ್ಪ ಶೆಟ್ಟಿ ಆರೂರು, ಜ್ಯೋತಿಷಿ ರಘುರಾಮ್ ಮಧ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಲೂಯಿಸ್ ಸ್ವಾಗತಿಸಿದರೆ, ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹರೀಶ್ ಆಚಾರ್ಯ ವರದಿ ಮಂಡಿಸಿದರು. ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಸನ್ಮಾನಿತರ ಪರಿಚಯಿಸಿರು. ಬಳಿಕ ಮನು ಹಂದಾಡಿಯವರಿಂದ ನಗುವಿನ ಮಾತಿನ ಮಂಟಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.