ಮಂಗಳೂರು ಜೈಲ್ನಲ್ಲಿ ಕೈದಿಗಳ ಮಾರಾಮಾರಿ
ಮಂಗಳೂರು, ನ.5: ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಇಂದು ನಡೆದಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.
ಜೈಲ್ ಅಧೀಕ್ಷರು ಇಂದು ಕಾರಾಗೃಹದಲ್ಲಿರುವ ಮಂಕಿಸ್ಟಾಂಡ್ ವಿಜಯ ಎಂಬಾತನ ಸಹಚರರೆನ್ನಲಾದ ನಿತೇಶ್, ಧನುಷ್, ಲತೀಷ್, ಪ್ರವೀಣ್ ಕುಲಾಲ್, ತಿಲಕ್ ಇವರಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬುದ್ಧಿವಾದವನ್ನು ಹೇಳಲು ಕಚೇರಿಗೆ ಕರೆದಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಚೇರಿಗೆ ನುಗ್ಗಿದ ವಿಚಾರಣಾಧೀನ ಕೈದಿಗಳಾದ ಗೌರೀಶ್ನ ಸಹಚರ ಎನ್ನಲಾದ ಹೇಮಚಂದ್ರ, ನಿತಿನ್ರಾಜ್, ಪವನ್ರಾಜ್, ಕಾರ್ತಿಕ್, ರಾಹುಲ್, ರಾಘವೇಂದ್ರ ಸಹಿತ ಸುಮಾರು 10 ಮಂದಿಯ ತಂಡ ವಾರ್ಡನ್ನ್ನು ದೂಡಿ ಹಾಕಿ ಪರಸ್ಪರ ಹೊಡೆದಾಡಿಕೊಂಡಿದೆ.
ಇದೇ ತಂಡ ಕಲ್ಲುಗಳನ್ನು ತೂರಿ ಹಲ್ಲೆ ಮುಂದಾಗಿದ್ದು, ಕಚೇರಿಯ ಕಿಟಕಿಯ ಗಾಜು ಪುಡಿಗೈದಿದೆ. ಹಲ್ಲೆಕೋರರಿಂದ ಎಸೆದ ಕಲ್ಲೊಂದು ಕಿಟಕಿಯ ಗಾಜನ್ನು ಒಡೆದಿದ್ದು, ಗಾಜಿನ ಚೂರು ನಿತೇಶ್ಗೆ ತಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಕತ್ಯವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.