ಟಿಪ್ಪುವಿನ ಕಿರೀಟ ಧರಿಸಿ, ಖಡ್ಗ ಹಿಡಿದು ನಿಂತವರಿಂದಲೇ ಈಗ ವಿರೋಧ: ಜಿ.ಪರಮೇಶ್ವರ್
ಮಂಗಳೂರು, ನ.7: ಟಿಪ್ಪು ಕಿರೀಟ ಧರಿಸಿ,ಟಿಪ್ಪುವಿನ ಖಡ್ಗ ಹಿಡಿದು ಟಿಪ್ಪುವಿನ ಘೋಷಣೆ ಕೂಗಿದವರು ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಟಿಪ್ಪು ಜಯಂತಿ ವಿರೊಧಿಸುತ್ತಿರುವವರನ್ನು ಗೃಹ ಸಚಿವ ಜಿ.ಪರಮೇಶ್ವರ್ ಪರೋಕ್ಷವಾಗಿ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದರು.
ಟಿಪ್ಪು ಜಯಂತಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಯಾರು ವಿರೋಧಿಸಿದರೂ ಸರಕಾರಿ ಕಾರ್ಯಕ್ರಮವನ್ನು ನಡೆಸಲು ಸರಕಾರ ಸಿದ್ಧವಿದೆ. ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಬಂದೋಬಸ್ತು ನಡೆಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಬಂದರೆ ಸ್ವಾಗತ
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮತ್ತೆ ಕಾಂಗ್ರೆಸಿಗೆ ಸೇರ್ಪಡೆಗೊಳ್ಳಲು ಬರುವುದಾದರೆ ಅವರನ್ನು ಸ್ವಾಗತಿಸುವುದಾಗಿ ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ಗಸ್ತುವಾಹನ
ಜಿಲ್ಲೆಗೆ ಹೆಚ್ಚುವರಿ 25 ಪೊಲೀಸ್ ಗಸ್ತುವಾಹನವನ್ನು ನೀಡಲಾಗುವುದು. ಬೆಂಗಳೂರು ನಗರದಲ್ಲಿ 5ನಿಮಿಷದೊಳಗೆ ಪ್ರಕರಣ ನಡೆದ ಸ್ಥಳಕ್ಕೆ ತಲುಪಲು ಪೊಲೀಸ್ ಗಸ್ತು ವಾಹನ ನೀಡಲಾಗಿದೆ. ಅದೇ ರೀತಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಈ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.
ರುದ್ರೇಶ್ ಹತ್ಯೆಯ ಬಗ್ಗೆ ದಾಖಲೆ ಇದ್ದರೆ ಪೊಲೀಸರಿಗೆ ನೀಡಿ ತನಿಖೆಗೆ ಸಹಕರಿಸಲಿ ಇಲ್ಲವಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರುದ್ರೇಶ್ ಹತ್ಯೆಯಲ್ಲಿ ಸಚಿವರ ಕೈವಾಡವಿದೆ ಎನ್ನುವ ಬಿಜೆಪಿ ಮುಖಂಡರಿಗೆ ಪರಮೇಶ್ವರ್ ಎಚ್ಚರಿಕೆ ನೀಡಿದರು. ರುದ್ರೇಶ್ ಸಾವಿನ ಪ್ರಕರಣ ತನಿಖೆಯಲ್ಲಿದೆ. ಇದರಲ್ಲಿ ಯಾರೇ ಅಪರಾಧಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.