19ರಿಂದ ಮಣಿಪಾಲ ವಿವಿ ಘಟಿಕೋತ್ಸವ
ಉಡುಪಿ, ನ.16: ಮಣಿಪಾಲ ವಿವಿಯ 23ನೆ ಘಟಿಕೋತ್ಸವ ನ.19ರಿಂದ ಒಟ್ಟು ಮೂರು ದಿನಗಳ ಕಾಲ ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯಲಿದೆ. ಒಟ್ಟು 3,000 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೊದಲ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸುವ ಹೊಸದಿಲ್ಲಿಯ ಎಐಸಿಟಿಇಯ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುದ್ಧೆ ಘಟಿಕೋತ್ಸವ ಭಾಷಣ ಮಾಡಲಿದ್ದು, ಸಮಾರಂಭದಲ್ಲಿ ನೋಕಿಯಾದ ಸಿಇಒ ಆಗಿರುವ ಮಣಿಪಾಲ ಎಂಐಟಿಯ ಹಳೆವಿದ್ಯಾರ್ಥಿ ರಾಜೀವ್ ಸೂರಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಗುವುದು.
ಅಲ್ಲದೆ ರಾಜೀವ್ ಸೂರಿ ನ.19ರಂದು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಲಿದ್ದು, ನ.20ರ 2ನೆ ದಿನದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ನ.26ರಂದು ನಡೆಯುವ ಘಟಿಕೋತ್ಸವದಲ್ಲಿ ಟಾಟಾ ಕ್ಯಾಪಿಟಲ್ನ ಸ್ಥಾಪಕ ಎಂಡಿ ಹಾಗೂ ಸಿಇಒ ಪ್ರವೀಣ್ ಪಿ.ಕಡ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮೂರು ದಿನಗಳಲ್ಲಿ 1,896 ವಿದ್ಯಾರ್ಥಿಗಳಿಗೆ ಪದವಿ, 1,478 ಮಂದಿಗೆ ಸ್ನಾತಕೋತ್ತರ ಪದವಿ, 45 ಮಂದಿಗೆ ಪಿಎಚ್ಡಿ, ಇಬ್ಬರಿಗೆ ಸೂಪರ್ ಸ್ಪೆಷಾಲಿಟಿ ಹಾಗೂ 14 ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಗುತ್ತದೆ ಎಂದು ವಿವಿ ಪ್ರಕಟನೆ ತಿಳಿಸಿದೆ.