ಮಕ್ಕಳ ಅಪಹರಣ ಹೆಸರಿನಲ್ಲಿ ವದಂತಿ ಹರಡಿದವರ ವಿರುದ್ಧ ಕ್ರಮ: ಕಮಿಷನರ್
ಮಂಗಳೂರು, ನ. 19: ಕಳೆದ ಸೋಮವಾರ ನಾಟೆಕಲ್ನ ಕೈರಂಗಳದಲ್ಲಿ ಮದ್ರಸ ವಿದ್ಯಾರ್ಥಿಯೋರ್ವನಿಗೆ ದುಷ್ಕರ್ಮಿಗಳಿಬ್ಬರು ಅಪಹರಣಕ್ಕೆ ಯತ್ನಿಸಿದ ಘಟನೆಯ ಬಳಿಕ ವಾಟ್ಸ್ಆ್ಯಪ್ ಮತ್ತಿತರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಜನರನ್ನು ಗೊಂದಲಕ್ಕೀಡು ಮಾಡಿದೆ.
‘‘ಶಾಲಾ ಮಕ್ಕಳನ್ನು ಅಪಹರಿಸಲು ತಂಡವೊಂದು ದ.ಕ. ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಜಾಗೃತರಾಗಿ’’ ಎಂಬ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿವೆ. ‘ಸಾಲೆತ್ತೂರಿನಲ್ಲಿ ಮೂರು ಮಕ್ಕಳ ಅಪಹರಣ’, ‘ಮಕ್ಕಳ ಕಳ್ಳರ ಜಾಲ’, ಮಾರ್ನಬೈಲ್, ಕುಕ್ಕಾಜೆ, ಮಂಚಿ ಸುತ್ತಮುತ್ತ ಖಾಕಿ ಸರ್ಪಗಾವಲು’, ‘ಎಲ್ಲಾ ಕಡೆ ನಾಕಾಬಂದಿ... ಸ್ವಲ್ಪ ಹುಷಾರಾಗಿರಿ’. ‘‘ಮಕ್ಕಳನ್ನು ಅಪಹರಿಸುವ ತಂಡವೊಂದು ಕರಾವಳಿಯಾದ್ಯಂತ ಸಂಚರಿಸುತ್ತಿದೆ. ದಯವಿಟ್ಟು ಸ್ವಲ್ಪ ದಿವಸದ ಮಟ್ಟಿಗೆ ನಿಮ್ಮ ಮಕ್ಕಳನ್ನು ಒಂಟಿಯಾಗಿ ಎಲ್ಲೂ ಬಿಡಬೇಡಿ’’ ಎಂಬಿತ್ಯಾದಿ ಬರಹಗಳು ವಾಟ್ಸ್ಆ್ಯಪ್ಗಳಲ್ಲಿ ಹರಿಯತೊಡಗಿವೆ.
ಇಂತಹ ಬರಹಗಳಿಂದಾಗಿ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಹೆದರುತ್ತಿದ್ದು, ವಾಟ್ಸ್ಆ್ಯಪ್ಗಳಲ್ಲಿ ಬರುತ್ತಿರುವ ಸಂದೇಶಗಳ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಕಮಿಷನರ್ರಿಂದ ಕಠಿಣ ಕ್ರಮದ ಎಚ್ಚರಿಕೆ
ದ.ಕ. ಜಿಲ್ಲೆಯಲ್ಲಿ ಮಕ್ಕಳನ್ನು ಅಪಹರಿಸಲು ತಂಡವೊಂದು ಸಕ್ರಿಯವಾಗಿದೆ ಎಂಬುದು ಕೇವಲ ವದಂತಿಯಾಗಿದ್ದು, ಇಂತಹ ವದಂತಿ ಹರಡಿಸುತ್ತಿರುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ವಾಟ್ಸ್ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಶಾಂತಿಗೆ ಭಂಗ ತರುವ ಅಥವಾ ಯಾವುದೇ ಪ್ರಚೋದನಾಕಾರಿ ಸಂದೇಶಗಳನ್ನು ಕಳುಹಿಸುವವರ ಬಗ್ಗೆ ದೂರು ಬಂದರೆ, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.