ಉಡುಪಿ: ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ
ಉಡುಪಿ, ನ.20: ಉಡುಪಿ ಕ್ರೈಸ್ತ ಧರ್ಮಪ್ರಾಂತದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಮಾರಂಭ ರವಿವಾರ ಉಡುಪಿ ಶೋಕಮಾತಾ ಇಗರ್ಜಿಯ ಆವರಣದಲ್ಲಿ ಜರಗಿತು.
ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿ, ಪರಮ ಪ್ರಸಾದವು ಏಕತೆ, ತ್ಯಾಗ ಹಾಗೂ ಕ್ಷಮೆಯ ಸಂಕೇತವಾಗಿದ್ದು, ನಿಜವಾದ ಪ್ರೀತಿಯು ನಮ್ಮ ನೆರೆಹೊರೆಯವರಲ್ಲಿ ತೋರಿಸುವುದರಲ್ಲಿ ಇದೆ. ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯ ಪ್ರೀತಿಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿ ರಬೇಕು ಎಂದರು.
ಬಲಿಪೂಜೆಯ ಬಳಿಕ ಉಡುಪಿ ಚರ್ಚ್ನ ಸಹಾಯಕ ಧರ್ಮಗುರು ವಂ.ರೋಯ್ಸನ್ ಫೆರ್ನಾಂಡಿಸ್ ಪರಮಪ್ರಸಾದ ಆರಾಧನೆಯನ್ನು ನೇರವೇರಿಸಿದರು. ಪರಮಪ್ರಸಾದವನ್ನು ವಿಶೇಷ ವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಉಡುಪಿ ಚರ್ಚಿನ ಮೂಲಕ ಸಾಗಿ, ಕಿತ್ತೂರು ಚೆನ್ನಮ್ಮ ರಸ್ತೆ, ಅಜ್ಜರಕಾಡು ಭುಜಂಗಪಾರ್ಕ್, ಬಿಗ್ ಬಝಾರ್, ಹಳೆ ತಾಲೂಕು ಕಚೇರಿ, ಕೋರ್ಟ್ ರಸ್ತೆ, ಡಯಾನಾ ಸರ್ಕಲ್ ಮೂಲಕ ಮರಳಿ ಚರ್ಚಿಗೆ ತಂದು ಗೌರವ ಸಲ್ಲಿಸಲಾಯಿತು.
ಸುವಾರ್ತಾ ಪ್ರಸಾರದ ರವಿವಾರದಂದು ಧರ್ಮಪ್ರಾಂತದ ವ್ಯಾಪ್ತಿ ಯಲ್ಲಿ ಅತೀ ಹೆಚ್ಚು ಮೊತ್ತ ಕಾಣಿಕೆ ಸಂಗ್ರಹಿಸಿದ ಸಂತ ಲಾರೆನ್ಸ್ ಚರ್ಚ್ ಮೂಡುಬೆಳ್ಳೆ(ಪ್ರಥಮ), ಶೋಕಮಾತಾ ಇಗರ್ಜಿ ಉಡುಪಿ(ದ್ವಿತೀಯ), ಲೂರ್ಡ್ಸ್ ಮಾತೆಯ ದೇವಾಲಯ ಕಣಜಾರು(ತೃತೀಯ), ಸಂತ ಲಾರೆನ್ಸ್ ಇಗರ್ಜಿ ಅತ್ತೂರು ಕಾರ್ಕಳ(ನಾಲ್ಕನೆ), ಸಂತ ಜೋನ್ ಎವಾಂಜೆಲಿಸ್ಟ್ ಇಗರ್ಜಿ ಶಂಕರಪುರ(ಐದನೆ) ಇವುಗಳನ್ನು ಧರ್ಮಾಧ್ಯಕ್ಷರು ಗೌರವಿಸಿದರು.
ಅಲ್ಲದೆ ಜನಸಂಖ್ಯೆಯ ಆಧಾರದಲ್ಲಿ ಅತಿ ಹೇಚ್ಚು ಮೊತ್ತ ಸಂಗ್ರಹಿಸಿದ ಸಂತ ಅಂತೋನಿ ಚರ್ಚು ಕುಂತಳನಗರ(ಪ್ರಥಮ), ಇಮ್ಯಾಕುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ನಕ್ರೆ ಕಾರ್ಕಳ (ದ್ವಿತೀಯ), ಶೋಕಮಾತಾ ಇಗರ್ಜಿ ಉಡುಪಿ (ತೃತೀಯ), ಲೂರ್ಡ್ಸ್ ಮಾತೆಯ ದೇವಾಲಯ ಕಣಜಾರು(ಚತುರ್ಥ), ಸಂತ ಲಾರೆನ್ಸ್ ಇಗರ್ಜಿ ಅತ್ತೂರು ಕಾರ್ಕಳ (ಪಂಚಮ) ಇವುಗಳನ್ನು ಕೂಡ ಗೌರವಿಸಲಾಯಿತು.
ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಕುಲಪತಿ ವಂ.ವಲೇರಿಯನ್ ಮೆಂಡೊನ್ಸಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೇಸಾ, ಕೆಥೊಲಿಕ್ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ವಂ.ಲಾರೆನ್ಸ್ ಡಿಸೋಜ, ಐದು ವಲಯದ ಪ್ರಧಾನ ಧರ್ಮ ಗುರುಗಳಾದ ವಂ.ಸ್ಟ್ಯಾನಿ ಬಿ.ಲೋಬೊ, ವಂ.ಅನಿಲ್ ಡಿಸೋಜ, ವಂ.ಜೋಸ್ವಿ ಫೆರ್ನಾಂಡಿಸ್, ವಂ.ಸ್ಟ್ಯಾನಿ ತಾವ್ರೋ, ವಂ.ಫೆಡ್ರಿಕ್ ಮಸ್ಕರೇನ್ಹಸ್, ವಂ.ಆಲ್ಬನ್ ಡಿಸೋಜ, ವಂ.ರೋಕ್ ಡೆಸಾ, ವಂ.ವಿಲಿಯಂ ಮಾರ್ಟಿಸ್, ವಂ.ಲಾರೆನ್ಸ್ ರೊಡ್ರಿಗಸ್, ವಂ.ಸ್ಟೀವನ್ ಡಿಸೋಜ, ವಂ. ರೋನ್ಸನ್, ವಂ.ಲಾರೆನ್ಸ್, ವಂ.ಕ್ಲೇಮಂಟ್ ಮಸ್ಕರೇನ್ಹಸ್ ಮೊದ ಲಾದವರು ಉಪಸ್ಥಿತರಿದ್ದರು.