ಸಿಐಟಿಯು ರಾಷ್ಟ್ರ ಸಮ್ಮೇಳನಕ್ಕೆ ಜಿಲ್ಲೆಯ ಪ್ರತಿನಿಧಿಗಳಿಗೆ ಬೀಳ್ಕೊಡುಗೆ
ಮಂಗಳೂರು, ನ. 23: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನ 15ನೆ ರಾಷ್ಟ್ರ ಸಮ್ಮೇಳನ 2016 ನವೆಂಬರ್ 26ರಿಂದ 30ರವರೆಗೆ ಒರಿಸ್ಸಾದ ಪುರಿಯಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಹಾಗೂ ಕಾರ್ಮಿಕ ವರ್ಗದ ಮೇಲೆ ಬಂಡವಾಳಶಾಹಿಗಳಿಂದ ನಡೆಯುತ್ತಿರುವ ದಬ್ಬಾಳಿಕೆಗಳು, ಕಾರ್ಮಿಕ ಕಾನೂನುಗಳ ತಿದ್ದುಪಡಿ, ನಿರುದ್ಯೋಗ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ.
ದ.ಕ. ಜಿಲ್ಲೆಯ ಕಾರ್ಮಿಕ ವರ್ಗವನ್ನು ಪ್ರತಿನಿಧಿಸಿ 14 ಜನ ಸಮ್ಮೇಳನದಲ್ಲಿ ಭಾಗವಸಲಿದ್ದಾರೆ. ಇಂದು ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿಧಿಗಳನ್ನು ಸಿಐಟಿಯು ಮಂಗಳೂರು ನಗರ ಸಮಿತಿ ವತಿಯಿಂದ ಬೀಳ್ಕೊಡಲಾಯಿತು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬೀಡಿ ಸಂಘಟನೆ ಪದ್ಮಾವತಿ ಶೆಟ್ಟಿ, ಜಯಂತಿ ಬಿ. ಶೆಟ್ಟಿ, ರಮಣಿ ಮೂಡುಬಿದಿರೆ, ವಸಂತಿ ಕುಪ್ಪೆಪದವು, ರಾಧಾ ಮೂಡುಬಿದಿರೆ, ರಾಮಣ್ಣ ವಿಟ್ಲ, ಬಾಬು ಪಿಲಾರ್, ರೋಹಿಣಿ ಬೆಳ್ತಂಗಡಿ, ಕಟ್ಟಡ ಕಾರ್ಮಿಕ ಸಂಘಟನೆಯಿಂದ ಸಂತೋಷ್ ಶಕ್ತಿನಗರ, ವಿದ್ಯುತ್ ಗುತ್ತಿಗೆದಾರ ಸಂಘದಿಂದ ಶಿವಕುಮಾರ್ ಬೆಳ್ತಂಗಡಿ ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಸಲಿದ್ದಾರೆ.
ಬೀಳ್ಕೊಡುಗೆ ಸಂದರ್ಭದಲ್ಲಿ ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಮುಖಂಡರಾದ ಸಂತೋಷ್ ಆರ್. ಎಸ್., ಉಮಾಶಂಕರ್, ನಾಗೇಶ್ ಕೋಟ್ಯಾನ್, ನೌಶಾದ್ ಮುಂತಾದವರು ಉಪಸ್ಥಿತರಿದ್ದರು.