ಬಿಜೆಪಿ ಯುವ ಮೋರ್ಚಾದಿಂದ ಸಂಭ್ರಮಾಚರಣೆ
ಮಂಗಳೂರು, ನ.28: ಬಿಜೆಪಿ ಯುವ ಮೋರ್ಚಾ ವತಿಯಿಂದ ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಎದುರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕೇಂದ್ರ ಸರಕಾರದಿಂದ ನೋಟು ರದ್ಧತಿ ಕ್ರಮದ ಬಗ್ಗೆ ಸಂಭ್ರಮಾಚರಿಸಲಾಯಿತು. ಇಲ್ಲಿನ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾಗೆ ತೆರಳಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬ್ಯಾಂಕ್ನ ಉಪಮಹಾಪ್ರಬಂಧಕರು ಮತ್ತು ಕಚೇರಿ ಸಿಬ್ಬಂದಿಗೆ ಗುಲಾಬಿ ಹೂವನ್ನು ನೀಡಿ ಸಿಹಿ ಹಂಚಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿ ಒತ್ತಡದ ನಡುವೆಯೂ 120 ಕೋಟಿ ಜನರ ಹೊಣೆಗಾರಿಕೆಯನ್ನು ವಹಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ಗ್ರಾಹಕರಿಗೆ ನಗುಮುಖದ ಸೇವೆಯೊಂದಿಗೆ ಪೂರ್ಣ ಸಹಕಾರ ನೀಡಿ ಪ್ರಧಾನಿಯವರ ಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಪ್ರಧಾನಿ ಮೋದಿ ಅವರ ಕ್ರಾಂತಿಕಾರಿ ನಿಲುವಿನ ಹೋರಾಟವನ್ನು ದೇಶದ ಜನಸಾಮಾನ್ಯರು ಸ್ವಾಗತಿಸಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ನಾಯಕರಾದ ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.