ಡಿಸೆಂಬರ್ನಲ್ಲಿ ‘ಗಿಳಿವಿಂಡು’ ಸ್ಮಾರಕ ಭವನ ಉದ್ಘಾಟನೆ
ಕಾಸರಗೋಡು, ಡಿ.4: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ‘ಗಿಳಿವಿಂಡು’ ಸ್ಮಾರಕ ಭವನ ಉದ್ಘಾಟನೆಗೆ ಸಜ್ಜಾಗಿದ್ದು, ಡಿಸೆಂಬರ್ ಕೊನೆ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ರವಿವಾರ ಮಂಜೇಶ್ವರದ ಕವಿ ಭವನದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ನವೀಕರಿಸಿದ ಕವಿ ಭವನ, ಯಕ್ಷಗಾನ ಮ್ಯೂಸಿಯಂ ಒಳಗೊಂಡ ನಲಂದಾ, ಭಾವನಿಕಾ ಸಭಾಂಗಣ, ವೈಶಾಖಿ, ಸಾಂಕೇತ್, ಆನಂದ್ ಎಂಬ ಮೂರು ಅತಿಥಿ ಗೃಹಗಳು, ಗ್ರಂಥಾಲಯ ಮೊದಲಾದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಈ ಕುರಿತು ಸಭೆಯಲ್ಲಿ ಅವಲೋಕನ ನಡೆಸಲಾಯಿತು. ಸುಮಾರು 5 ಕೋ.ರೂ. ವೆಚ್ಚದಲ್ಲಿ ರೂಪಿಸಲಾದ ಈ ಸ್ಮಾರಕವನ್ನು ಡಿ.11ರಿಂದ 30ರ ಮಧ್ಯೆ ಉದ್ಘಾಟನಾ ನೆರವೇರಿಸುವುದಾಗಿ ತೀರ್ಮಾನಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇರಳ ಕರ್ನಾಟಕ ಮುಖ್ಯಮಂತ್ರಿ, ಸಚಿವರು ಪಾಲ್ಗೊಳ್ಳುವರು.
ಜಿಲ್ಲಾಧಿಕಾರಿ ಕೆ.ಜೀವನ್ ಬಾಬು, ಮೆನೇಜಿಂಗ್ ಟ್ರಸ್ಟಿ ಡಾ.ಡಿ.ಕೆ ಚೌಟ, ಎಂ.ಜೆ.ಕಿಣಿ, ಬಿ.ವಿ.ಕಕ್ಕಿಲ್ಲಾಯ, ಕೆ.ತೇಜೋಮಯ, ಕೆ.ಆರ್.ಜಯಾನಂದ, ಪಿ.ಆರ್.ಸುಂದರೇಶ್, ಜಿಲ್ಲಾ ಉಪವಾರ್ತಾಧಿಕಾರಿ ಎಂ.ಮಧುಸೂದನ್, ಎಸ್.ಸಜೀವ್, ಸತ್ಯನಾರಾಯಣ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.