ಬಾಸೆಲ್ ನಿಸ್ವಾರ್ಥ ಸೇವೆಯ ಮಿಶನರಿ: ಶಾಸಕ ಲೋಬೊ
ಬಾಸೆಲ್ ಮಿಶನ್ ಶತಮಾನೋತ್ತರ ವಜ್ರ ಮಹೋತ್ಸವ
ಮಂಗಳೂರು, ಡಿ.4: ತುಳು ಭಾಷೆ, ಸಾಹಿತ್ಯಕ್ಕೆ ಬಾಸೆಲ್ ಮಿಶನ್ ಮಹತ್ವದ ಕೊಡುಗೆಯನ್ನು ನೀಡಿದ್ದು, ಇದರ ನಿಸ್ವಾರ್ಥ ಸೇವೆ ಅಮೋಘ ಎಂದು ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ನಗರದ ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ವತಿಯಿಂದ ಬಲ್ಮಠ ಕಾಸಸ್ ಗ್ರೌಂಡ್ನಲ್ಲಿ ರವಿವಾರ ನಡೆದ ಬಾಸೆೆಲ್ ಮಿಶನ್ ಶತಮಾನೋತ್ತರ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರಿಶ್ಚಿಯನ್ ಮಿಶನರಿಗಳು ಭಾರತೀಯ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ನೀಡಿವೆ. ಕಿಟೆಲ್ ರಚಿಸಿದ ಕನ್ನಡ ನಿಘಂಟು ಹೆಚ್ಚು ಸಹಕಾರಿಯಾಗಿದ್ದು, ಕಿಟೆಲ್ ಕನ್ನಡ ನಿಘಂಟನ್ನು ಬಾಸೆಲ್ ಮಿಶನ್ ಮುದ್ರಣಾಲಯವು ಹೆಚ್ಚು ಜನರನ್ನು ತಲುಪುವಂತೆ ಮಾಡಿದೆ ಎಂದರು.
ನಿವೃತ್ತ ಬಿಷಪ್ ರೆ.ಡಾ.ಸಿ.ಎಲ್. ಫುರ್ಟಾಡೋ ಮಾತನಾಡಿ, ಕ್ರೈಸ್ತ ಮಿಶನರಿಗಳು ಕನ್ನಡ ಸಾಹಿತ್ಯದ ಜೊತೆಗೆ ಇನ್ನಿತರ ಏಳು ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದು, ಮಿಶನರಿಗಳಲ್ಲಿ ಬಾಸೆಲ್ ಮಿಶನ್ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಕ್ರೈಸ್ತ ಧಾರ್ಮಿಕ ಪುಸ್ತಕಗಳಲ್ಲದೆ ವಿವಿಧ ಧರ್ಮಗಳ ಗ್ರಂಥಗಳನ್ನು ಪ್ರಕಟಿಸಿ ಸಾಮರಸ್ಯವನ್ನು ಮೆರೆದಿದೆ ಎಂದರು.
ಬಲ್ಮಠ ಇನ್ಸ್ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿಯ ಮುಖ್ಯಸ್ಥ ರೆ.ಡಾ.ಹನಿ ಕಬ್ರಾಲ್ ಅಧ್ಯಕ್ಷತೆ ವಹಿಸಿದ್ದರು.
ಬಾಸೆಲ್ ಮಿಶನ್ ವ್ಯವಸ್ಥಾಪಕ ರೋಹನ್.ಜಿ. ಮಸ್ಕರೆನ್ಹಸ್ ಮಾತನಾಡಿದರು. ಗಾಬ್ರಿಯಲ್ ವಿನ್ಸೆಂಟ್ರನ್ನು ಸನ್ಮಾನಿಸಲಾಯಿತು. ಸಾಮರಸ್ಯ ಕ್ರಿಸ್ಮಸ್ ಅಂಗವಾಗಿ ನಡೆದ ಗೂಡುದೀಪ ಸ್ಪರ್ಧೆ ವಿಜೇತರಾದ ಸನ್ವಿಯಾ ಕೊಡಿಕಲ್, ಗಗನ್ ಕೊಡಿಕಲ್, ಪ್ರಜ್ವಲ್ ಡಿಕುನ್ಹಾ ಅವರಿಗೆ ಬಹುಮಾನ ವಿತರಿಸಲಾಯಿತು.
ಬೆನ್ನೆಟ್ ಅಮ್ಮನ್ ಸಂಸ್ಥೆಯ ಕುರಿತು ಮಾತನಾಡಿದರು. ಈಜೀನ್ ಸಾಲಿನ್ಸ್, ವಿ. ಮಹೇಶ್ಕುಮಾರ್, ಇಮ್ಮಾನ್ವೆಲ್ ಭಾಸ್ಕರ್, ಸಾಗರ್ ಸುಂದರ್ರಾಜ್, ಜೇಕರ್ ಉಪಸ್ಥಿತರಿದ್ದರು. ವಾಣಿ ಮಹೇಶ್, ವಿವೇಕ್ ಕಾರ್ಯಕ್ರಮ ನಿರೂಪಿಸಿದರು. ಬಾಸೆಲ್ ಸಮಿತಿಯ ಸಂಚಾಲಕ ರೆ. ಎಡ್ವಿನ್ ವಾಲ್ಟರ್ ವಂದಿಸಿದರು.