ಕಾರ್ಮಿಕರ ಶ್ರಮದಿಂದ ದೇಶದ ಬೆಳವಣಿಗೆ: ರಾಧಾಕೃಷ್ಣ
ಪುತ್ತೂರು, ಡಿ.7: ಕಾರ್ಮಿಕರ ಶ್ರಮದಲ್ಲಿ ದೇಶದ ಬೆಳವಣಿಗೆಯಿದೆ. ಅಸಂಘಟಿತ ಕಾರ್ಮಿಕರು ಸಂಘಟಿತರಾಗುವ ಮೂಲಕ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯವಿದೆ ಎಂದು ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಹೇಳಿದರು. ಅವರು ಶನಿವಾರ ಆರ್ಯಾಪು ಗ್ರಾಮದ ದೇವಸ್ಯ ಮಂಜುನಾಥ ಸಭಾಭವನದಲ್ಲಿ ನಡೆದ ಪ್ರೇರಣಾ ಕಟ್ಟಡ ಕಾರ್ಮಿಕರ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಸಮಾವೇಶದಲ್ಲಿ ಮಾತನಾಡಿದರು.
ಕಾರ್ಮಿಕರ ಭವಿಷ್ಯದ ಬಗ್ಗೆ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದೆ, ಆದರೆ ಮಾಹಿತಿ ಮತ್ತು ಅರಿವಿನ ಕೊರತೆಯಿಂದಾಗಿ ಸಮರ್ಪಕವಾಗಿ ಯೋಜನೆಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ರೀತಿಯ ಸಮಾವೇಶಗಳು ಮಾಹಿತಿ ಮತ್ತು ಅರಿವು ನೀಡುವಲ್ಲಿ ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆರ್ಯಾಪು ಗ್ರಾಪಂ ಉಪಾಧ್ಯಕ್ಷ ವಸಂತ ಶ್ರೀದುರ್ಗಾ ಮಾತನಾಡಿ, ಕಟ್ಟಡ ಕಾರ್ಮಿಕರು ಶ್ರಮಿಕ ಜೀವಿಗಳಾಗಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಕೌಟುಂಬಿಕ ನೆಮ್ಮದಿ ಅಗತ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತ ಶಂಸುದ್ದೀನ್ ಸಂಪ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಕಾರ್ಮಿಕರ ಸಂಘಟನೆಯ ಅಗತ್ಯತೆಯ ಕುರಿತು ತಿಳಿಸಿದರು. ಆರ್ಯಾಪು ಗ್ರಾಪಂ ಮಾಜಿ ಅಧ್ಯಕ್ಷ ವಿಜಯ ಬಿ. ಎಸ್. ಶುಭ ಹಾರೈಸಿದರು.
ಈ ಸಂದಭರ್ದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ, ನಿವೃತ್ತ ಕಾರ್ಮಿಕ ಇಲಾಖೆಯ ಸಿಬ್ಬಂದಿ ಚಿದಾನಂದ ಕಾಮತ್ ಕಾಸರಗೋಡು, ಮತ್ತು ಹಿರಿಯ ಕಟ್ಟಡ ಕಾರ್ಮಿಕ ಅಬ್ಬುಚ್ಚ ಬಲ್ಲೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮರಣಹೊಂದಿದ ಕಾರ್ಮಿಕರಿಗೆ ಇಲಾಖೆ ನೀಡುವ 55 ಸಾವಿರ ರೂ. ಪರಿಹಾರ ಧನವನ್ನು ಇತ್ತೀಚೆಗೆ ನಿಧನರಾದ ಕಟ್ಟಡ ಕಾರ್ಮಿಕ ಬಾಲಕೃಷ್ಣ ಆಚಾರ್ಯ ವಳತ್ತಡ್ಕ ಅವರ ಪತ್ನಿಗೆ ಹಸ್ತಾಂತರಿಸಲಾಯಿತು.
20 ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಕಾರ್ಡು ವಿತರಣೆ ಮಾಡಲಾಯಿತು. ನಾರಾಯಣ ಮೇಸ್ತ್ರಿ ಸ್ವಾಗತಿಸಿ, ವಂದಿಸಿದರು. ಸಾಮಾಜಿಕ ಕಾರ್ಯಕರ್ತ ರಾಮ್ ಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
*ನೂತನ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ಪ್ರೇರಣಾ ಕಟ್ಟಡ ಕಾರ್ಮಿಕ ಸಂಘ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನಾರಾಯಣ ನಾಯ್ಕ ಗೆಣಸಿನಕುಮೇರು, ಗೌರವಾಧ್ಯಕ್ಷ ವಸಂತ ಶ್ರೀದುರ್ಗಾ, ಗೌರವ ಸಲಹೆಗಾರ ರಾಂಪ್ರಸಾದ್, ಉಪಾಧ್ಯಕ್ಷ ರಮೇಶ್ ವಳತ್ತಡ್ಕ, ಕಾರ್ಯದರ್ಶಿ ಆನಂದ ನಾಯ್ಕ ಗೆಣಸಿನಕುಮೇರು, ಜೊತೆ ಕಾರ್ಯದರ್ಶಿ ಚನಿಯಪ್ಪ ನಾಯ್ಕ ಬಂಗಾರಡ್ಕ, ಖಜಾಂಚಿ ಕಾಂತಪ್ಪ ಕುಲಾಲ್, ಹಾಗೂ ಆರು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.