ಪ್ರವಾದಿ ಶಿಕ್ಷಣದಂತೆ ನಡೆದರೆ ಉತ್ತಮ ಸಮಾಜದ ನಿರ್ಮಾಣ : ಅಝ್ಹರುಲ್ಲಾ ಕಾಸ್ಮೀ
ಮಲ್ಪೆ, ಡಿ.8: ಪ್ರವಾದಿ ಸ್ಮರಣೆ ಕೇವಲ ರಬೀಉಲ್ ಅವ್ವಲ್ ತಿಂಗಳಲ್ಲಿ ಮಾತ್ರ ಆಗಿರದೆ, ಪ್ರತಿದಿನವೂ ನಡೆಯಬೇಕು. ಪ್ರವಾದಿ ಹೇಳಿಕೊಟ್ಟ ಶಿಕ್ಷಣದಂತೆ ಜೀವನ ನಡೆಸಿದರೆ ಉತ್ತಮ ಸಮಾಜದ ನಿರ್ಮಾಣ ಮತ್ತು ಯಶಸ್ಸು ಸಾಧ್ಯ ಎಂದು ಹಾಫಿಝ್ ಮೌಲಾನಾ ಅಝ್ಹರುಲ್ಲಾ ಕಾಸ್ಮೀ ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಇತ್ತೀಚೆಗೆ ಮಲ್ಪೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಸಮಾಜ ನಿರ್ಮಾಣ; ಪ್ರವಾದಿಯ ವರ ಮಾರ್ಗದರ್ಶನದಂತೆ’ ಎಂಬ ವಿಷಯದ ಕುರಿತು ಅವರು ಮಾತ ನಾಡುತಿದ್ದರು. ವ್ಯಕ್ತಿಗಳಲ್ಲಿರುವ ಕೆಡುಕನ್ನು ದ್ವೇಷಿಸಬೇಕೆ ಹೊರತು ವ್ಯಕ್ತಿಗಳನ್ನಲ್ಲ ಎಂದು ಇಸ್ಲಾಮ್ ಕಲಿಸುತ್ತದೆ. ನಾವು ಇರುವುದು ಕೇವಲ ಮುಸ್ಲಿಮರಿಗಾಗಿ ಅಲ್ಲ, ಎಲ್ಲಾ ಮಾನವರಿಗಾಗಿ. ಪ್ರವಾದಿಗಳ ಸಂಗಡಿಗರೂ ಸಮಾಜದಲ್ಲಿ ಶಾಂತಿ ಮತ್ತು ಪ್ರೀತಿಗಾಗಿ ಅನುಪಮ ತ್ಯಾಗವನ್ನು ಮಾಡಿದ್ದಾರೆ. ವೈರಿಗಳೊಂದಿಗೂ ಪ್ರೀತಿಯಿಂದ ವರ್ತಿಸಿದ್ದಾರೆ ಎಂದರು.
ಎಲ್ಲ ರೀತಿಯ ಅಸಮಾನತೆ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತಬೇಕು. ಸಮಾಜದ ಭಾಗವಾಗಿರುವ ನಾವು ಮೊದಲು ನಮ್ಮೊಳಗೆ ಬದಲಾವಣೆ ತಂದುಕೊಳ್ಳಬೇಕು. ನಮ್ಮ ವಿಜಯ ಎಂಬುದು ಸಮಾಜ ನಿರ್ಮಾಣದಲ್ಲಿನ ನಮ್ಮ ಕೊಡುಗೆಯನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ನ ಸ್ಥಾನೀಯ ಅಧ್ಯಕ್ಷ ಉಸ್ತಾದ್ ರಫೀಕ್ ಸ್ವಾಗತಿಸಿ, ವಂದಿಸಿದರು.