ಕಲ್ಲಬೆಟ್ಟು : ಸ್ವ-ಸಹಾಯ ಗುಂಪುಗಳ ವಾರ್ಷಿಕೋತ್ಸವ
ಮೂಡುಬಿದಿರೆ, ಡಿ.11 : ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ (ನಿ) ಇದರ ಸಹಕಾರದೊಂದಿಗೆ ಸ್ವ-ಸಹಾಯ ಗುಂಪುಗಳ ವಾರ್ಷಿಕೋತ್ಸವ ಸಮಾರಂಭವು ಬ್ಯಾಂಕಿನ "ಅಕ್ಷಯ ಧಾಮ"ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಸಹಕಾರ ಸಂಘವೆಂದರೆ ಪರಸ್ಪರ ಸಹಕಾರ ಮಾಡುವುದೆಂದು ಅರ್ಥ. ಕಷ್ಟ ಕಾರ್ಪಣ್ಯಗಳು ಬಂದಾಗ ಅದಕ್ಕೆ ಎದೆಗುಂದದೆ ಪರಸ್ಪರ ಧೈರ್ಯ ಮತ್ತು ಪ್ರೀತಿಯಿಂದ ಎದುರಿಸಬೇಕು. ಸಹಕಾರ ಮನೋಭಾವವಿದ್ದರೆ ಸಮಾಜ ಮತ್ತು ದೇಶ ಪರಿವರ್ತನೆಯಾಗಬಲ್ಲದು ಎಂದು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಮಾತನಾಡಿ, ಉಳಿತಾಯದ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಆರ್ಥಿಕವಾಗಿ ಶಕ್ತರಾಗಲು, ನಮ್ಮಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಸಲು ಹಾಗೂ ವ್ಯವಸ್ಥೆಗಳನ್ನು ಸರಿಪಡಿಸಲು ಸ್ವ-ಸಹಾಯ ಗುಂಪುಗಳು ಇರುವುದು ಎನ್ನುವುದನ್ನು ಎಲ್ಲರೂ ತಿಳಿಯಬೇಕು. ವಂಚನೆ ಇಲ್ಲದೆ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಜಯರಾಮ ಆಳ್ವ, ರಮೇಶ್ಚಂದ್ರ ಪಿ., ಕಲ್ಲಬೆಟ್ಟು ಶಾಲಾ ಮುಖ್ಯ ಶಿಕ್ಷಕ ವಿನಯ ಕುಮಾರ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ಯಾಂಕಿನ ಉಪಾಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ನಿದೇರ್ಶಕರುಗಳಾದ ಶಶಿಧರ ಶೆಟ್ಟಿ, ಎನ್.ಕೆ.ಸಾಲ್ಯಾನ್, ಪೂರ್ಣಿಮಾ ಶೆಟ್ಟಿ, ತಾರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಲೀಲಾವತಿ ಸ್ವಾಗತಿಸಿದರು. ಸ್ವ-ಸಹಾಯ ಸಂಘಗಳ ಮೇಲ್ವಿಚಾರಕಿ ದಯಾವತಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಚಾಮುಂಡಿಬೆಟ್ಟ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸುರತ್ಕಲ್ನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಇವರಿಂದ "ಕರ್ಣಾರ್ಜುನ ಕಾಳಗ" ಯಕ್ಷಗಾನ ತಾಳಮದ್ದಲೆ ಪ್ರಸ್ತುತಗೊಂಡಿತು.