ಗಂಡಿಬಾಗಿಲು, ನೀರಾಜೆಯಲ್ಲಿ ಮೀಲಾದುನ್ನಬಿ
ಉಪ್ಪಿನಂಗಡಿ, ಡಿ.12: ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್ ಇಸ್ಲಾಮ್ ಯಂಗ್ಮೆನ್ಸ್ ವತಿಯಿಂದ ಮೀಲಾದುನ್ನಬಿ ರ್ಯಾಲಿಯನ್ನು ಗಂಡಿಬಾಗಿಲು ಮಸೀದಿಯ ಖತೀಬ್ ಅನಸ್ ತಂಙಳ್ ಉದ್ಘಾಟಿಸಿದರು.
ಗಂಡಿಬಾಗಿಲುನಿಂದ ಮೀಲಾದ್ ಮೆರವಣಿಗೆಯನ್ನು ಕೊಲ, ನೀರಾಜೆ ಮದ್ರಸದವರೆಗೆ ನಡೆಸಲಾಯಿತು. ಈ ಮಧ್ಯೆ ಗಂಡಿಬಾಗಿಲು ಮದ್ರಸ ವಿದ್ಯಾರ್ಥಿಗಳು ದಫ್ ಸಂಘದ ವತಿಯಿಂದ ಆಕರ್ಷಕ ದಫ್ ಪ್ರದರ್ಶನ ನೀಡಿದರು. ಬಳಿಕ ಸಭಾಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಸೀದಿಯ ಅಧ್ಯಕ್ಷ ಪಿ.ಯಾಕೂಬ್, ಯಂಗ್ಮೆನ್ಸ್ ಅಧ್ಯಕ್ಷ ಅಬ್ದುರ್ರಹ್ಮಾನ್, ಸದರ್ ಮುಅಲ್ಲಿಂ ಅಬ್ದುರ್ರಹ್ಮಾನ್ ಅರ್ಶದಿ, ರಫೀಕ್ ಮುಸ್ಲಿಯಾರ್, ಅಬೂಬಕರ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ಯಂಗ್ಮೆನ್ಸ್ ಕಾರ್ಯದರ್ಶಿ ಝಕರಿಯ ನೇರೆಂಕಿ ಸ್ವಾಗತಿಸಿದರು. ಎನ್.ಕೆ.ನಿಸಾರ್ ಗಂಡಿಬಾಗಿಲು ವಂದಿಸಿದರು. *ನೀರಾಜೆ ಮದ್ರಸದಲ್ಲಿ ಮೀಲಾದುನ್ನಬಿ: ಮೀಲಾದುನ್ನಬಿ ಪ್ರಯುಕ್ತ ನೀರಾಜೆ ನೂರುಲ್ ಹುದಾ ಮದ್ರಸದಲ್ಲಿ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಆತೂರು ಧ್ವಜಾರೋಹಣ ನೆರವೇರಿಸಿದರು.
ಗಂಡಿಬಾಗಿಲು ಮಸೀದಿಯ ಖತೀಬ್ ಅನಸ್ ತಂಙಳ್ ದುಆ ನೆರವೇರಿಸಿದರು. ಮದ್ರಸದ ಸದರ್ ಮುಅಲ್ಲಿಂ ಅಬ್ದುರ್ರಝಾಕ್ ದಾರಿಮಿ, ಇಲ್ಯಾಸ್ ದಾರಿಮಿ, ಬಶೀರ್ ಉಪಸ್ಥಿತರಿದ್ದರು.
ಈ ಸಂದರ್ಭ ಗಂಡಿಬಾಗಿಲು ದಫ್ ಸಂಘದ ವಿದ್ಯಾರ್ಥಿಗಳು ಆಕರ್ಷಕ ದಫ್ ಪ್ರದರ್ಶನ ನೀಡಿದರು.