ಜಿಲ್ಲಾಧಿಕಾರಿಗೆ ಬೀಡಿ ಗುತ್ತಿಗೆದಾರರ ಸಂಘಟನೆಯಿಂದ ಮನವಿ
ಮಂಗಳೂರು, ಡಿ.12: ಕೇಂದ್ರ ಸರಕಾರವು 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ಬೀಡಿಕಾರ್ಮಿಕ ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಮಹಿಳೆಯರು ಬೀಡಿ ಕಟ್ಟುವ ಬದಲು ಬ್ಯಾಂಕ್ ಮುಂದೆ ನಿಲ್ಲುವಂತಾಗಿದೆ. ಈ ಮಧ್ಯೆ ಬೀಡಿ ಗುತ್ತಿಗೆದಾರರು ಕಾರ್ಮಿಕರಿಗೆ ಬ್ಯಾಂಕ್ ಮೂಲಕ ಹಣ ಜಮಾವಣೆಗೆ ಸೂಚನೆ ನೀಡಿದ್ದಾರೆನ್ನಲಾಗಿದೆ. ಆದರೆ, ಹೆಚ್ಚಿನ ಬೀಡಿ ಕಾರ್ಮಿಕರು ಬ್ಯಾಂಕ್ ಖಾತೆ ಹೊಂದಿಲ್ಲ. ಇದು ಹೊಸ ಸಮಸ್ಯೆಗೆ ಕಾರಣವಾಗಿದೆ. ಈ ಮಧ್ಯೆ ಬೀಡಿ ಗುತ್ತಿಗೆದಾರರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಕಂಪೆನಿಯ ಬೀಡಿ ಮಜೂರಿಯನ್ನು ವಾರದಲ್ಲಿ 24 ಸಾವಿರಕ್ಕಿಂತ ಅಧಿಕ ಡ್ರಾ ಮಾಡುವಂತಿಲ್ಲ. ಮಾಡಿದರೂ ಅದನ್ನು ಎಲ್ಲ ಕಾರ್ಮಿಕರಿಗೆ ಹಂಚಲು ಸಾಧ್ಯವಿಲ್ಲವಾಗಿದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ದ.ಕ. ಮತ್ತು ಜಿಲ್ಲಾ ಬೀಡಿ ಕಂಟ್ರಾಕ್ಟುದಾರರ ಸಮಾನ ಸಂಘಟನೆ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಎಂ. ಸುರೇಶ್ಚಂದ್ರ ಶೆಟ್ಟಿ, ಮುಹಮ್ಮದ್ ರಫಿ, ಎಸ್.ಆಲಿಯಬ್ಬ, ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ ಶೆಟ್ಟಿ ಕೈಕರ, ರವಿ ಉಡುಪಿ, ಶರೀಫ್ ಪುತ್ತೂರು ನಿಯೋಗದಲ್ಲಿದ್ದಾರೆ.