ಕಲ್ಲಬೆಟ್ಟು ಶಾಲೆಯಲ್ಲಿ "ಆಹಾರ-ಅಭ್ಯಾಸ" ಮಾಹಿತಿ
ಮೂಡುಬಿದಿರೆ, ಡಿ.15 : ನಮ್ಮ ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕವಾದ ಆಹಾರ ಅಭ್ಯಾಸ ಕ್ರಮ ಅಗತ್ಯ. ಬೇಕರಿಯಲ್ಲಿ ಸಿಗುವ ಕೆಲವೊಂದು ಸಿಹಿ ಪದಾರ್ಥ, ಮೈದಾನಿಂದ ಮಾಡಿದ ತಿಂಡಿ-ತಿನಿಸು, ಹಾಗೂ ಕೋಲ್ಡ್ ಡ್ರಿಂಕ್ಸ್ಗಳಲ್ಲಿ ವಿಷಕಾರಕ ಅಂಶಗಳು ಸೇರಿರುವುದರಿಂದ ಅವುಗಳನ್ನು ಮಕ್ಕಳು ಸೇವಿಸದಿರಿ ಎಂದು ಪತ್ರಕರ್ತ, ಮೂಡುಬಿದಿರೆ ಪ್ರೆಸ್ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ ಹೇಳಿದರು.
ಅವರು ಉನ್ನತೀಕರಿಸಿದ ಜಿ.ಪಂ.ಮಾ.ಹಿ.ಪ್ರಾ.ಶಾಲೆ ಕಲ್ಲಬೆಟ್ಟು ಇಲ್ಲಿ ಗುರುವಾರದಂದು "ಆಹಾರ-ಅಭ್ಯಾಸ"ಕ್ರಮದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪೆನ್ಸಿಲ್ನಲ್ಲಿ ಸೀಸವಿದೆ. ಹಲ್ಲುಜ್ಜಲು ಬಳಸುವ ಪೇಸ್ಟ್ನಲ್ಲಿ, ಐಸ್ ಕ್ರೀಮ್ಗಳಿಗೆ ಪ್ರಾಣಿಜನ್ಯ ಕೊಬ್ಬನ್ನು ಬಳಸಲಾಗುತ್ತಿದೆ. ಗೋಬಿ ಮಂಚೂರಿಗೆ ಬಳಸುವ ಕಾಲಿಫ್ಲವರ್ವನ್ನು ಬೆಳೆಸುವ ಸಂದರ್ಭದಲ್ಲಿ ಅಧಿಕವಾಗಿ ರಾಸಾಯನಿಕ ಮದ್ದುಗಳನ್ನು ಬಳಸಲಾಗುತ್ತಿದೆ. ಬಾಟ್ಲಿ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ ಅವರು ಪೇಪರ್ನಲ್ಲಿ ಕಟ್ಟಿಕೊಡುವ ತಿಂಡಿ-ತಿನಿಸುಗಳನ್ನು ಸೇವಿಸದಿರಿ. ಮನೆಯಲ್ಲಿ ಬೆಳೆಸುವ ತರಕಾರಿಗಳನ್ನು ಹಾಗೂ ಪೇರಳೆಯಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ಎಂದು ಸಲಹೆ ನೀಡಿದರು.
ಶಾಲೆಯ ಪದವಿಯೇತರ ಮುಖ್ಯ ಶಿಕ್ಷಕ ವಿನಯ ಕುಮಾರ್ ಅವರು ಸ್ವಾಗತಿಸಿದರು.
ಶಾಲೆಯ ಹಳೆ ವಿದ್ಯಾರ್ಥಿ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಹಾಗೂ ಸಹಶಿಕ್ಷಕಿ ಪ್ರತಿಭಾ ಉಪಸ್ಥಿತರಿದ್ದರು.
ಶಿಕ್ಷಕಿ ಉಷಾ ವಂದಿಸಿದರು.