ಉಡುಪಿ : ನೂತನ ಜಿಲ್ಲಾ ನ್ಯಾಯಾಧೀಶರಿಂದ ಅಧಿಕಾರ ಸ್ವೀಕಾರ
ಉಡುಪಿ, ಡಿ.16: ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಇಂದು ಅಧಿಕಾರ ವಹಿಸಿಕೊಂಡ ಟಿ.ವೆಂಕಟೇಶ ನಾಯಕ್ ಅವರಿಗೆ ಉಡುಪಿ ವಕೀಲರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉಡುಪಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿ ಯಲ್ಲಿ ವೆಂಕಟೇಶ್ ನಾಕ್ ಅವರನ್ನು ಸಂಘದ ಮಾಜಿ ಅಧ್ಯಕ್ಷರು ಅಭಿನಂದಿಸಿದರು.
ಬಳಿಕ ಮಾತನಾಡಿದ ನ್ಯಾಯಾಧೀಶರು, ವಕೀಲರ ಸಂಘದಲ್ಲಿ ಯಾವುದೇ ಕುಂದು ಕೊರತೆ ಇದ್ದರೂ ಅದನ್ನು ನಿವಾರಿಸಲು ಪ್ರಯತ್ನಿಸ ಲಾಗುವುದು. ಉತ್ತಮ ತೀರ್ಪು ಮತ್ತು ಆದೇಶದ ಮೂಲಕ ನ್ಯಾಯದಾನ ಮಾಡಲು ವಕೀಲರ ಸಹಕಾರ ಅಗತ್ಯವಾಗಿ ಬೇಕು ಎಂದರು.
ಬೆಳಗಾವಿ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಇವರು ಇದೀಗ ಉಡುಪಿಗೆ ವರ್ಗಾವಣೆಗೊಂಡಿದ್ದಾರೆ. ಇದಕ್ಕೂ ಮುಂಚೆ ಅವರು ಸಿಂಧನೂರು ಹಾಗೂ ಬೆಂಗಳೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಕೆ.ದಯಾನಂದ ಸ್ವಾಗತಿಸಿದರು.
ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ನೂತನ ನ್ಯಾಯಾಧೀಶರ ಪರಿಚಯ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು.
ನ್ಯಾಯವಾದಿ ಯಶಸ್ವಿನಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.