ಸಿವಿಲ್ ಪ್ರಕರಣದಲ್ಲಿ ಪೊಲೀಸರಿಂದ ಹಿಂಸೆ: ಆರೋಪ
ಉಡುಪಿ, ಡಿ.16: ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಿವಿಲ್ ಪ್ರಕರಣದಲ್ಲಿ ಎದುರುದಾರರೊಂದಿಗೆ ಶಾಮೀಲಾಗಿ ಮಾನಸಿಕ ಹಿಂಸೆ ನೀಡುತ್ತಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಕೋಟ ಠಾಣೆಯ ಸಿಬ್ಬಂದಿ ವಿಕ್ರಮ್ ಮತ್ತು ಸಂತೋಷ್ ಎಂಬವರ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗಿದೆ ಎಂದು ಕುಂದಾಪುರ ಬೇಳೂರಿನ ಶಂಕರ್ ಹೆಗ್ಡೆ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 81ರ ಹರೆಯದ ಶಂಕರ್ ಹೆಗ್ಡೆ, ಬೇಳೂರು ಗ್ರಾಮದಲ್ಲಿ ಪಾಲು ಆಗಿರುವ ನನ್ನ ಹೆಸರಿನಲ್ಲಿರುವ 46 ಸೆಂಟ್ಸ್ ಜಾಗಕ್ಕೆ ತಾಯಿಯ ತಂಗಿ ಮಗಳು ಜಯಶೀಲಾ ಶೆಡ್ತಿ ಹಾಗೂ ಸಹೋದರರು ಅಕ್ರಮ ಪ್ರವೇಶ ಮಾಡಿ ಅಡಿಕೆ ಕೀಳುವ ಬಗ್ಗೆ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಈ ಮಧ್ಯೆ ಪೊಲೀಸರು ಹಾಗೂ ಜಯಶೀಲಾ ಶೆಡ್ತಿ ನಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದವರು ಆರೋಪಿಸಿದರು. ನಮಗೆ ಹಿಂಸೆ ನೀಡುತ್ತಿರುವ ಪೊಲೀಸರು ಹಾಗೂ ಜಯಶೀಲಾ ಶೆಡ್ತಿ ಕುಟುಂಬದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮಗೆ ಆತ್ಮಹತ್ಯೆಯೊಂದೆ ದಾರಿ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪತ್ನಿ ಸುಶೀಲಾ ಶೆಡ್ತಿ ಉಪಸ್ಥಿತರಿದ್ದರು.