ಭಾಸ್ಕರ್ ಶೆಟ್ಟಿ ಹೊಟೇಲ್ ವಿವಾದ: ದೂರು ಪ್ರತಿದೂರು
ಉಡುಪಿ, ಡಿ.19: ಕೊಲೆಯಾದ ಉದ್ಯಮಿ ಭಾಸ್ಕರ್ ಶೆಟ್ಟಿ ಮಾಲಕತ್ವದ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿರುವ ದುರ್ಗಾ ಇಂಟರ್ನ್ಯಾಷನಲ್ ಹೊಟೇಲ್ನ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಹೊಟೇಲ್ನ ಮ್ಯಾನೇಜರ್ ಬೆಳ್ತಂಗಡಿಯ ಅಜಿತ್ ಕುಮಾರ್(52) ಡಿ.18ರ ಅಪರಾಹ್ನ 1:30ರ ಸುಮಾರಿಗೆ ಹೊಟೇಲ್ನಲ್ಲಿರುವಾಗ ಸಂದೇಶ್, ಪ್ರದೀಪ್ ಪೈ, ಜಯರಾಜ್ ಹಾಗೂ ಇತರರು ಅಕ್ರಮ ಪ್ರವೇಶ ಮಾಡಿ ಹೋಟೇಲಿಗೆ ಸಂಬಂಧಿಸಿದ ಕಚೇರಿಯ ಬೀಗ ಒಡೆಯಲು ಯತ್ನಿಸಿ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ನಂತರ ಅಲ್ಲಿಗೆ ಬಂದ ಲಾಡ್ಜ್ನ ವಾರೀಸುದಾರೆ ರೂಪಾ ಶೆಟ್ಟಿಯವರಿಗೂ ಜೀವ ಬೆದರಿಕೆ ಹಾಕಿ ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಯತ್ನ ಆರೋಪ:
ಕರಾರಿನಂತೆ ದುರ್ಗಾ ಇಂಟರ್ನ್ಯಾಷನಲ್ ಲಾಡ್ಜಿಂಗ್ ಮತ್ತು ಬೋರ್ಡಿಂಗ್ನ್ನು ಸಂದೇಶ್ ಎಂಬವರು ನಡೆಸಿಕೊಂಡು ಬರುತ್ತಿದ್ದು, ಇದರ ಹಣವನ್ನು ಭಾಸ್ಕರ ಶೆಟ್ಟಿ ಮೃತಪಟ್ಟ ನಂತರ ಅವರ ತಾಯಿ ಗುಲಾಬಿ ಶೆಡ್ತಿಯವರಿಗೆ ತಿಂಗಳಿಗೆ ಒಂದು ಲಕ್ಷ ರೂ. ನೀಡುತ್ತಿದ್ದರು. ಸಂದೇಶ್ ಬೆಂಗಳೂರಿಗೆ ಹೋಗಿದ್ದ ವೇಳೆ ರೂಪಾ ಭಾಸ್ಕರ ಶೆಟ್ಟಿ ಮತ್ತು ಅವರ ಮಗ ಭಾರ್ಗವ ಶೆಟ್ಟಿ ಹಾಗೂ ಇತರರು ಲಾಡ್ಜ್ಗೆ ಬಂದು ಕಚೇರಿಯ ಬೀಗವನ್ನು ಬದಲಾಯಿಸಿದ್ದರು.
ಡಿ.18ರಂದು ಸಂದೇಶ ಲಾಡ್ಜಿಂಗ್ನಲ್ಲಿರುವಾಗ ಭಾರ್ಗವ ಶೆಟ್ಟಿ ಕೆಳಗೆ ಕಾರ್ ಪಾರ್ಕಿಂಗ್ ಮಾಡುವ ಸ್ಥಳಕ್ಕೆ ಬರಲು ಹೇಳಿದ್ದು, ಅಲ್ಲಿಗೆ ಹೋದ ಸಂದೇಶ್ಗೆ ರೂಪ ಭಾಸ್ಕರ ಶೆಟ್ಟಿ, ಭಾರ್ಗವ ಶೆಟ್ಟಿ ಹಾಗೂ ಇತರ 5 ಜನ ಸೇರಿ ಕಬ್ಬಿಣದ ರಾಡ್ನಿಂದ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರಿನಲ್ಲಿ ತಿಳಿಸಲಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.