ಗ್ರಾಮ ಲೆಕ್ಕಿಗರನ್ನು ಇತರೆ ಕಾರ್ಯಕ್ಕೆ ಬಳಸಬೇಡಿ: ದಿನಕರ ಬಾಬು
ಉಡುಪಿ ಜಿಪಂ ಮಾಸಿಕ ಕೆಡಿಪಿ ಸಭೆ
ಉಡುಪಿ, ಡಿ.19:ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರಾಗಿ ಆಯ್ಕೆಯಾದ ನೌಕರರನ್ನು ಕಚೇರಿಯ ಇತರೆ ಕಾರ್ಯಗಳಿಗೆ ನಿಯೋಜಿಸಬೇಡಿ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಹೇಳಿದ್ದಾರೆ.
ಜಿಲ್ಲೆಗೆ ಹೊಸದಾಗಿ ನೇಮಕಗೊಂಡಿರುವ ಗ್ರಾಮ ಲೆಕ್ಕಿಗರನ್ನು ಅವರಿಗೆ ನಿಯೋಜಿಸಿದ ಗ್ರಾಮಗಳಿಗೆ ನೇಮಕ ಮಾಡದೆ ಕಚೇರಿಯ ಕೆಲಸ ಕಾರ್ಯ ಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹಲವು ಕೆಲಸಗಳಿಗೆ ಸಮಸ್ಯೆಗಳಾಗುತ್ತಿವೆ. ಅಲ್ಲದೇ ಕೆಲವು ಗ್ರಾಮ ಲೆಕ್ಕಿಗರನ್ನು 2ಕ್ಕಿಂತ ಹೆಚ್ಚು ಗ್ರಾಮಗಳಿಗೆ ನಿಯೋಜಿಸುತ್ತಿರುವುದರಿಂದ ಗ್ರಾಮಗಳ ಜನತೆಗೆ ಸರಿಯಾದ ಸೇವೆ ದೊರೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ದಿನಕರಬಾಬು ಸೂಚಿಸಿದರು.
ಜಿಲ್ಲೆಯಲ್ಲಿ 14ನೇ ಹಣಕಾಸು ಯೋಜನೆಯಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದುಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿಯನ್ನಾಗಿ ಮಾಡಲು ಅನುದಾನ ನಿಗದಿಪಡಿಸಿದ್ದು, ಇದಕ್ಕಾಗಿ 158 ಅಂಗನವಾಡಿಗಳನ್ನು ಗುರುತಿಸಲಾಗಿದೆ. ಈ ಅಂಗನವಾಡಿಗಳಿಗೆ ಬೇಕಾದ ಸೌಕರ್ಯಗಳ ಕುರಿತು ಕ್ರಿಯಾಯೋಜನೆ ತಯಾರಿಸಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.
ಉಚ್ಚಿಲ-ಪಡುಬಿದ್ರೆ ರಸ್ತೆ ಪೂರ್ಣಗೊಳ್ಳದೇ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ ತಿಳಿಸಿದರು. ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಪ್ರದೇಶದಲ್ಲಿ ಅಗತ್ಯ ಸೂಚನಾ ಫಲಕ ಹಾಗೂ ಬ್ಯಾರಿಕೇಡ್ಗಳನ್ನು ಅಳವಡಿಸುವುದಾಗಿ ತಿಳಿಸಿದರು.
2017ರ ಜನವರಿಯಿಂದ ಉದ್ಯೋಗ ಖಾತರಿ ಯೋಜನೆಗಳ ಫಲಾನುಭವಿ ಗಳ ಖಾತೆಗೆ ನೇರವಾಗಿ ಹಣ ಜಮೆ ಆಗುವುದರಿಂದ ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ ಗ್ರಾಪಂಗಳು ತಮ್ಮ ವ್ಯಾಪ್ತಿಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯನ್ನು ಹಾಗೂ ಜಾಬ್ ಕಾರ್ಡ್ ವಿತರಣೆಯನ್ನು ಪೂರ್ಣಗೊಳಿಸುವಂತೆ ಎಲ್ಲಾ ತಾಪಂ ಇಓಗಳಿಗೆ ಸಿಇಓ ಸೂಚಿಸಿದರು.
ಗ್ರಾಪಂಗಳಲ್ಲಿ ರಾಜೀವ್ ಗಾಂಧೀ ಚೈತನ್ಯ ಯೋಜನೆಯಲ್ಲಿ ನಿರುದ್ಯೋಗಿ ಗಳಿಗೆ ತರಬೇತಿ ನೀಡುವ ಕುರಿತು ಹಾಗೂ ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆ ಮಾಡುವ ಕುರಿತ ಯೋಜನೆ ವಿವರಗಳನ್ನು ಎಲ್ಲಾ ಗ್ರಾಪಂಗಳಿಗೆ ನೀಡುವಂತೆ ಇಓಗಳಿಗೆ ಸಿಇಓ ಸೂಚಿಸಿದರು.
ಜಿಲ್ಲೆಯ ಹಲವು ಗ್ರಾಪಂಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಇದ್ದು, ಈ ಸಮಸ್ಯೆಯ ನಿವಾರಣೆಗೆ ಜಿಲ್ಲೆಯ ಹೆದ್ದಾರಿ ಪಕ್ಕದ 54 ಗ್ರಾಪಂಗಳಲ್ಲಿ ಸಮರ್ಪಕ ಕಸ ವಿಲೇವಾರಿ ನಿರ್ವಹಣೆ ಮಾಡಲು, ಪ್ರಥಮ ಹಂತದಲ್ಲಿ ಡಿ.22ರಿಂದ 28 ರವರೆಗೆ 5 ದಿನಗಳ ಕಾಲ ಪ್ರಾಯೋಗಿಕವಾಗಿ ಪ್ರತಿ 2 ಗ್ರಾಪಂಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗುತ್ತಿದೆ. ಈ ಅಧಿಕಾರಿ ಸಂಬಂಧಪಟ್ಟ ಗ್ರಾಮದ ವಸತಿ ಸಮುಚ್ಛಯಗಳ ನಾಗರಿಕರು ಹಾಗೂ ಪೇಟೆಯ ವ್ಯಾಪಾರಿ ಗಳೊಂದಿಗೆ ಸಭೆ ನಡೆಸಿ ಗ್ರಾಪಂ ಸಹಕಾರದೊಂದಿಗೆ ಇವರಿಂದ ಪ್ರತಿದಿನ ಕಸ ಸಂಗ್ರಹಿಸಿ, ಅದನ್ನು ಮೂಲದಲ್ಲೇ ವಿಂಗಡಣೆ ಮಾಡಿ, ಹಸಿ ಕಸವನ್ನು ಮಣ್ಣಿನಲ್ಲಿ ನಿರ್ದಿಷ್ಟ ಅಳತೆಯ ಹೊಂಡ ತೆಗೆದು ವಿಲೇವಾರಿ ಮಾಡುವಂತೆ ಹಾಗೂ ಒಣ ಕಸವನ್ನು ವಿಂಗಡಿಸಿ ಹರಾಜು ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹಸಿ ಕಸ ವಿಲೇವಾರಿಗೆ ಸರಕಾರಿ ಜಾಗ ಇಲ್ಲವಾದಲ್ಲಿ ಖಾಸಗಿ ವ್ಯಕ್ತಿಗಳ ಭೂಮಿಯನ್ನು ಪಡೆದು ಅಲ್ಲಿ ವಿಲೇವಾರಿ ಮಾಡಿ, ಅಲ್ಲಿ ದೊರೆಯುವ ಗೊಬ್ಬರವನ್ನು ಅ ಜಾಗದ ಮಾಲೀಕರಿಗೆ ನೀಡುವಂತೆ ಹಾಗೂ ಒಣ ಕಸದಲ್ಲಿ ವಿಂಗಡಿಸುವ ವಸ್ತುಗಳನ್ನು ಖರೀದಿಸಲು ಗುಜರಿ ವ್ಯಾಪಾರಿಗಳು ಸಿದ್ದವಿದ್ದು, ಇದನ್ನು ಹರಾಜು ಮಾಡಿ, ದೊರೆಯುವ ಮೊತ್ತವನ್ನು ಗ್ರಾಪಂಗೆ ಜಮೆ ಮಾಡುವಂತೆ ಸಿಇಓ ಸೂಚಿಸಿದರು. ಈ ಕಾರ್ಯಕ್ರಮ ಈಗಾಗಲೇ ಕಾಪು ಪುರಸಭೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಹಸಿ ಕಸ ವಿಲೇವಾರಿಗೆ ಸರಕಾರಿ ಜಾಗ ಇಲ್ಲವಾದಲ್ಲಿ ಖಾಸಗಿ ವ್ಯಕ್ತಿಗಳ ಭೂಮಿಯನ್ನು ಪಡೆದು ಅಲ್ಲಿ ವಿಲೇವಾರಿ ಮಾಡಿ,ಅಲ್ಲಿ ದೊರೆಯುವ ಗೊಬ್ಬರವನ್ನು ಆ ಜಾಗದ ಮಾಲೀಕರಿಗೆ ನೀಡುವಂತೆ ಹಾಗೂ ಒಣಕಸದಲ್ಲಿ ವಿಂಗಡಿಸುವ ವಸ್ತುಗಳನ್ನು ಖರೀದಿಸಲು ಗುಜರಿ ವ್ಯಾಪಾರಿಗಳು ಸಿದ್ದವಿದ್ದು, ಇದನ್ನು ಹರಾಜುಮಾಡಿ, ದೊರೆಯುವ ಮೊತ್ತವನ್ನು ಗ್ರಾಪಂಗೆ ಜಮೆ ಮಾಡುವಂತೆ ಸಿಇಓ ಸೂಚಿಸಿದರು. ಈ ಕಾರ್ಯಕ್ರಮ ಈಗಾಗಲೇ ಕಾಪು ಪುರಸೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾಶೆಟ್ಟಿ, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.