ಭಾಸ್ಕರ್ ಶೆಟ್ಟಿ, ಹೊಟೇಲ್, ವಿವಾದ, ದೂರು, ಪ್ರತಿದೂರು,
ಉಡುಪಿ, ಡಿ.19: ಕೊಲೆಯಾದ ಉದ್ಯಮಿ ಭಾಸ್ಕರ್ ಶೆಟ್ಟಿ ಮಾಲಕತ್ವದ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿರುವ ದುರ್ಗಾ ಇಂಟರ್ನ್ಯಾಷನಲ್ ಹೊಟೇಲ್ನ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಹೊಟೇಲ್ನ ಮ್ಯಾನೇಜರ್ ಬೆಳ್ತಂಗಡಿಯ ಅಜಿತ್ ಕುಮಾರ್(52) ಡಿ.18ರ ಅಪರಾಹ್ನ 1:30ರ ಸುಮಾರಿಗೆ ಹೊಟೇಲ್ನಲ್ಲಿರುವಾಗ ಸಂದೇಶ್, ಪ್ರದೀಪ್ ಪೈ, ಜಯರಾಜ್ ಹಾಗೂ ಇತರರು ಅಕ್ರಮ ಪ್ರವೇಶ ಮಾಡಿ ಹೊಟೇಲಿಗೆ ಸಂಬಂಧಿಸಿದ ಕಚೇರಿಯ ಬೀಗ ಒಡೆಯಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ಅಲ್ಲಿಗೆ ಬಂದ ಲಾಡ್ಜ್ನ ವಾರಸುದಾರೆ ರೂಪಾ ಶೆಟ್ಟಿಯವರಿಗೂ ಜೀವ ಬೆದರಿಕೆ ಹಾಕಿ ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
*ಪ್ರತಿದೂರು ದಾಖಲು: ಕರಾರಿನಂತೆ ದುರ್ಗಾ ಇಂಟರ್ನ್ಯಾಷನಲ್ ಹೊಟೇಲನ್ನು ಸಂದೇಶ್ ಎಂಬವರು ನಡೆಸಿಕೊಂಡು ಬರುತ್ತಿದ್ದು, ಇದರ ಹಣವನ್ನು ಭಾಸ್ಕರ್ ಶೆಟ್ಟಿ ಮೃತಪಟ್ಟ ನಂತರ ಅವರ ತಾಯಿ ಗುಲಾಬಿ ಶೆಡ್ತಿಯವರಿಗೆ ತಿಂಗಳಿಗೆ ಒಂದು ಲಕ್ಷ ರೂ. ನೀಡುತ್ತಿದ್ದರು ಎನ್ನಲಾಗಿದೆ. ಸಂದೇಶ್ ಬೆಂಗಳೂರಿಗೆ ಹೋಗಿದ್ದ ವೇಳೆ ರೂಪಾ ಭಾಸ್ಕರ್ ಶೆಟ್ಟಿ ಮತ್ತು ಅವರ ಮಗ ಭಾರ್ಗವ ಶೆಟ್ಟಿ ಕಚೇರಿಯ ಬೀಗವನ್ನು ಬದಲಾಯಿಸಿದ್ದರು ಎಂದು ತಿಳಿದು ಬಂದಿದೆ. ಡಿ.18ರಂದು ಭಾರ್ಗವ ಶೆಟ್ಟಿ ಸಂದೇಶ್ರನ್ನು ಕಾರ್ ಪಾರ್ಕಿಂಗ್ ಮಾಡುವ ಸ್ಥಳಕ್ಕೆ ಬರಲು ಹೇಳಿದ್ದು, ಅಲ್ಲಿ ರೂಪಾ ಭಾಸ್ಕರ್ ಶೆಟ್ಟಿ, ಭಾರ್ಗವ ಶೆಟ್ಟಿ ಹಾಗೂ ಇತರ 5 ಜನ ಸೇರಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ದಾಖಲಾಗಿದೆ.