ಕರಾವಳಿ ಉತ್ಸವದಲ್ಲಿ ಡಿ.26ರಂದು ಬ್ಯಾರಿ ಸಾಹಿತ್ಯ ಅಕಾಡಮಿ ಕಾರ್ಯಕ್ರಮ
ಮಂಗಳೂರು, ಡಿ.24: ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2016-17ರ ಪ್ರಯುಕ್ತ ಡಿ.26ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಸಕ ಬಿ.ಎ.ಮೊಯ್ದಿನ್ ಬಾವ ಶುಭಾಶಂಸನೆಗೈಯುವರು. ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬಳಿಕ ಇಬ್ರಾಹೀಂ ತಣ್ಣೀರುಬಾವಿ ಅಧ್ಯಕ್ಷತೆಯಲ್ಲಿ ಬಹುಭಾಷಾ ಸಾಮರಸ್ಯ ಕವಿಗೋಷ್ಠಿ ನಡೆಯಲಿದೆ. ಭಾಸ್ಕರ್ ರೈ ಕುಕ್ಕುವಳ್ಳಿ (ತುಳು), ಹುಸೈನ್ ಕಾಟಿಪಳ್ಳ (ಬ್ಯಾರಿ), ಎಡ್ವರ್ಡ್ ಲೋಬೊ(ಕೊಂಕಣಿ), ರಾಜಾರಾಮ್ ವರ್ಮ(ಕನ್ನಡ), ಬಿ.ಎ.ಶಂಸುದ್ದೀನ್ ಮಡಿಕೇರಿ(ಬ್ಯಾರಿ) ಕವಿಗಳಾಗಿ ಭಾಗವಹಿಸಲಿದ್ದಾರೆ.
ರಶೀದ್ ನಂದಾವರ ಮತ್ತು ತಂಡದಿಂದ ಬ್ಯಾರಿ ಹಾಡುಗಳು, ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಒಪ್ಪನೆ ಪಾಟ್ ಹಾಗೂ ಸಾಮರಸ್ಯ ನೃತ್ಯ ನಡೆಯಲಿದೆ. ಅಕಾಡಮಿಯ ಸದಸ್ಯ ಟಿ.ಎ.ಆಲಿಯಬ್ಬ ಜೋಕಟ್ಟೆ ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿರುತ್ತಾರೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.