ಮನೆ ಬಾಗಿಲು ಮುರಿದು ಕಳ್ಳತನ
ಪುತ್ತೂರು, ಡಿ.24 : ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ನಡೆಸಿದ ಪ್ರಕರಣ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಪುತ್ತೂರು ನಗರದ ಹೊರವಲಯದ ನೆಹರೂನಗರ ಕಾಯರ್ಮಜಲ್ ಎಂಬಲ್ಲಿನ ಹರಿಪ್ರಸಾದ್ ರಾವ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ.
ಶುಕ್ರವಾರ ರಾತ್ರಿ ಹರಿಪ್ರಸಾದ್ ರಾವ್ ಹಾಗೂ ಮನೆಯವರು ತಮ್ಮ ಮನೆಗೆ ಬೀಗ ಹಾಕಿ ಕೊಕ್ಕಡದಲ್ಲಿನ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆಯಲ್ಲಿ ಮನೆಯ ಮುಂಬಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಡೆ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನದ ಬೆಂಡೋಲೆ, ಬೆಳ್ಳಿಯ ಬಿಂದಿಗೆ, ಲೋಟ ಮತ್ತಿತರ ಸೊತ್ತುಗಳನ್ನು ಕಳವು ನಡೆಸಿದ್ದಾರೆ. ಕಳವು ಮಾಡಲಾದ ಸೊತ್ತುಗಳ ಮೌಲ್ಯ ರೂ. 24 ಸಾವಿರ ಎಂದು ಅಂದಾಜಿಸಲಾಗಿದೆ.
ಶನಿವಾರ ಮನೆ ಮಂದಿ ಹಿಂದಿರುಗಿ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story